ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಇನ್ನೂ ಅಂತ್ಯಗೊಂಡಿಲ್ಲ ಎಂದು ಶಾಸಕ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಈ ಗೊಂದಲವನ್ನು ಹೈಕಮಾಂಡ್ ಸರಿಯಾಗಿ ಪರಿಹರಿಸದಿದ್ದರೆ ಪಕ್ಷದ ಬೆಳವಣಿಗೆಗೆ ತೊಂದರೆ ಉಂಟಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬೈಎಲೆಕ್ಷನ್ ಫಲಿತಾಂಶದ ಬಳಿಕ ಮತ್ತೆ ನಾಯಕತ್ವ ವಿಚಾರ ಚರ್ಚೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಯನ್ನು ನಮ್ಮಂತಹವರ ಬಳಿ ಕೇಳುವುದು ಸೂಕ್ತವಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರು ಬೇರೆ ಇದ್ದಾರೆ ಎಂದರು.
ನಾಯಕತ್ವದ ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದ್ದು, ನಾವು ಅದನ್ನು ಒಪ್ಪಲೇಬೇಕು. ನಮಗೆ ಟಿಕೆಟ್ ನೀಡಿದ್ದು ಕೂಡ ಹೈಕಮಾಂಡ್ ಆಗಿರುವುದರಿಂದ ಅವರ ಆದೇಶಕ್ಕೆ ನಾವು ಬದ್ಧರಾಗಿರಬೇಕು ಎಂದು ಹೇಳಿದರು.
ಇನ್ನೂ ಪಕ್ಷದ ಒಳಗಿನ ಗೊಂದಲವನ್ನು ಶೀಘ್ರವಾಗಿ ಪರಿಹರಿಸಬೇಕು. ಇಲ್ಲವಾದರೆ ಅದು ಪಕ್ಷದ ಮುಂದಿನ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂದು ಅಭಿಪ್ರಾಯಪಟ್ಟರು.
ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಕೆಲವರು ಸುಮ್ಮನೆ ಹೇಳಿಕೊಳ್ಳುತ್ತಾರೆ ಎಂದು ಹೇಳಿದರು. ಜೊತೆಗೆ, ಪಕ್ಷಕ್ಕೆ ಸೇರಲು ಓಪನ್ ಆಫರ್ ನೀಡುವ ಬಗ್ಗೆ ಮಾತನಾಡಿದ ಅವರು, ಅದು ಅವರ ರಾಜಕೀಯ ಶೈಲಿ ಎಂದು ಲೇವಡಿ ಮಾಡಿದರು.



