ಬೆಂಗಳೂರು: ಮೇ 13ರಂದು ಬೆಂಗಳೂರು ಜನತೆಗೆ ಮಹತ್ವದ ‘ಬಿಗ್ ಗಿಫ್ಟ್’ ಘೋಷಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆ ದಿನವೇ ಜನತೆಗೆ ವಿಶೇಷ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.
“ಸುರ್ಜೇವಾಲ ಅವರೊಂದಿಗೆ ರಾಜಕೀಯ ವಿಚಾರವಾಗಿ ಸಭೆ ನಡೆಸಿದ್ದೇವೆ. ಈಗಾಗಲೇ ಅಧಿಕಾರಿಗಳನ್ನು ಕರೆದು ಅಗತ್ಯ ಸೂಚನೆಗಳನ್ನು ನೀಡಿದ್ದೇನೆ. ಮೇ 13ರಂದು ಬೆಂಗಳೂರಿನ ಜನತೆಗೆ ದೊಡ್ಡ ಗ್ಯಾರಂಟಿ ಹಾಗೂ ವಿಶೇಷ ಗಿಫ್ಟ್ ನೀಡಲಿದ್ದೇವೆ. ಅದರ ಸಂಪೂರ್ಣ ವಿವರವನ್ನು ಅಂದೇ ಬಹಿರಂಗಪಡಿಸುತ್ತೇನೆ,” ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ಜನತೆಗೆ ನೀಡಿದ ಸಲಹೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಅವರು ಜನರಿಗೆ ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎನ್ನುತ್ತಾರೆ. ಆದರೆ ಪೆಟ್ರೋಲ್ ದರ ಏಕೆ ಏರಿಕೆಯಾಗಿದೆ ಎಂಬುದನ್ನು ಹೇಳುವುದಿಲ್ಲ. ಚಿನ್ನದ ಬೆಲೆ ಏರಿಕೆಯ ಬಗ್ಗೆ ಸಹ ಸ್ಪಷ್ಟನೆ ನೀಡುತ್ತಿಲ್ಲ. ಜನರಿಗೆ ತೊಂದರೆ ಆಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಪ್ರಧಾನಿ ಅವರೇ ವಿವರಿಸಬೇಕು ಎಂದು ಪ್ರಶ್ನಿಸಿದರು.
ಚಿನ್ನ ಖರೀದಿಸಬೇಡಿ ಎನ್ನುವ ಸಲಹೆ ಪ್ರಾಯೋಗಿಕವಲ್ಲ ಎಂದು ಟೀಕಿಸಿದ ಅವರು, ಮದುವೆ, ಶುಭಕಾರ್ಯಗಳಿಗೆ ಚಿನ್ನ ಖರೀದಿ ಮಾಡಲೇಬೇಕು. ಅದನ್ನು ನಿಲ್ಲಿಸೋಕೆ ಸಾಧ್ಯವೇ? ಜನರಿಗೆ ಸಲಹೆ ಕೊಡುವುದು ಸುಲಭ. ಆದರೆ ಅದು ವಾಸ್ತವಿಕವಾಗಿರಬೇಕು,” ಎಂದು ಹೇಳಿದರು.
ಕೊರೋನಾ ಅವಧಿಯಲ್ಲಿನ ಪ್ರಧಾನಿ ಮನವಿಯನ್ನು ಉಲ್ಲೇಖಿಸಿದ ಡಿಕೆಶಿ, “ಆಗ ದೀಪ ಹಚ್ಚಿ ಎಂದರು, ದೀಪ ಹಚ್ಚಿದ್ದೇವೆ. ಚಪ್ಪಾಳೆ ತಟ್ಟಿ ಎಂದರು, ತಟ್ಟಿದ್ದೇವೆ. ಆದರೆ ಅದರಿಂದ ಸಮಸ್ಯೆ ನಿಂತಿತೇ? ಯಾವುದೇ ಸಮಸ್ಯೆಗೆ ಪ್ರಾಯೋಗಿಕ ಪರಿಹಾರ ಬೇಕು,” ಎಂದು ಅಭಿಪ್ರಾಯಪಟ್ಟರು.



