ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿ ಗೇಟ್ ಬಳಿ ಕೇವಲ 200 ರೂ. ಸಾಲದ ವಿಚಾರಕ್ಕೆ ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ನಡೆದಿದೆ.
ಮೃತರನ್ನು ದ್ಯಾವಸಂದ್ರ ಗ್ರಾಮದ ನಿವಾಸಿ ಮಂಜುನಾಥ (40) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಅದೇ ಗ್ರಾಮದ ಮುನಿರಾಜ್ (41) ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 12ರಂದು ಅಪ್ಪಕಾರನಹಳ್ಳಿ ಗೇಟ್ ಬಳಿ ಇರುವ ಟೀ ಅಂಗಡಿ ಬಳಿ ಘಟನೆ ನಡೆದಿದ್ದು, ಮುನಿರಾಜ್ ಬೆಳಗ್ಗೆ ಟೀ ಕುಡಿಯಲು ಅಂಗಡಿಗೆ ಬಂದಿದ್ದಾನೆ. ಈ ವೇಳೆ ಹಳೆಯ ಸಾಲದ ವಿಚಾರವಾಗಿ ಮಂಜುನಾಥ್ ಮತ್ತು ಮುನಿರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ.
ಮುನಿರಾಜ್ ಮತ್ತೆ ಸಾಲದಲ್ಲಿ ಟೀ ಕೊಡುವಂತೆ ಕೇಳಿದ್ದಾನೆ. ಆದರೆ ಮಂಜುನಾಥ್ ಹಳೆಯ ಸಾಲ ವಾಪಸ್ ನೀಡುವಂತೆ ಹೇಳಿದ ಕಾರಣ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರಗೊಂಡಿದೆ.
ಈ ವೇಳೆ ಸಿಟ್ಟಿಗೆದ್ದ ಮುನಿರಾಜ್, ಪಕ್ಕದಲ್ಲಿದ್ದ ನೀಲಗಿರಿ ಮರದ ದೊಣ್ಣೆಯನ್ನು ತೆಗೆದುಕೊಂಡು ಮಂಜುನಾಥ್ ಅವರ ತಲೆಗೆ ಮನಸೋಯಿಚ್ಚೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಅವರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಾಹಿತಿಯ ಪ್ರಕಾರ, ಆರೋಪಿಯಾದ ಮುನಿರಾಜ್ ಈ ಹಿಂದೆ ತನ್ನ ಹೆತ್ತ ತಾಯಿಗೆ ಚಾಕು ಹಾಕಿದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದು ಈಗ ಈ ಕೊಲೆ ಮಾಡಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



