ಕೋಲಾರ: ಜಿಲ್ಲೆಯಾದ್ಯಂತ ಕೃಷಿ ಹೊಂಡಗಳಲ್ಲಿ ಸಂಭವಿಸುತ್ತಿರುವ ಸರಣಿ ಸಾವುಗಳು ಭಾರೀ ಆತಂಕಕ್ಕೆ ಕಾರಣವಾಗಿವೆ. ಕಳೆದ ಹದಿನೈದು ದಿನಗಳಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆ ಜಿಲ್ಲಾಧಿಕಾರಿ ಎಂ.ಆರ್. ರವಿ ವಿಶೇಷ ಸಭೆ ನಡೆಸಿ ತುರ್ತು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಕೃಷಿ ಹೊಂಡಗಳಿಗೆ ಏಳು ದಿನಗಳೊಳಗೆ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಬೇಕು. ಸುರಕ್ಷತಾ ಕ್ರಮ ಕೈಗೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಹಾಗೂ ಅಗತ್ಯವಿದ್ದರೆ ಹೊಂಡಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಮಾಲೂರು ತಾಲೂಕಿನ ನಕ್ಕನಹಳ್ಳಿಯಲ್ಲಿ ಭಾನುವಾರ ನಡೆದ ದುರಂತ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಈಜು ಕಲಿಸಲು ಹೋಗಿದ್ದ ಶ್ರೀನಿವಾಸ್ (40) ಹಾಗೂ ಅವರ ಇಬ್ಬರು ಮಕ್ಕಳು ಚೇತನ್ (13) ಮತ್ತು ರಾಜೇಶ್ (8) ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದರು.
ಇದಕ್ಕೂ ಮೊದಲು ಬಂಗಾರಪೇಟೆ ತಾಲೂಕಿನ ಬೋಡೇನಹಳ್ಳಿಯಲ್ಲಿ ಅಣ್ಣ-ತಂಗಿ ತನುಶ್ರೀ ಮತ್ತು ಕಾರ್ತಿಕ್ ಮೃತಪಟ್ಟಿದ್ದರೆ, ಶ್ರೀನಿವಾಸಪುರ ತಾಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಇಬ್ಬರು ಯುವಕರು ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದರು.
ಕೃಷಿ ಹೊಂಡಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ಈ ಸರಣಿ ದುರಂತಗಳಿಗೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈಗ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೈತರಿಗೆ ಸುರಕ್ಷತಾ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.



