ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಕ್ತಿಮಂದಿರ ಮಹರ್ಷಿ ಲಿಂ. ಜಗದ್ಗುರು ವೀರಗಂಗಾಧರ ಭಗವತ್ಪಾದರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಲಿಂ. ವೀರಗಂಗಾಧರ ಮಹರ್ಷಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಕಳೆದ ಎಪ್ರಿಲ್ 19ರಂದು ಡಿಕೆಶಿ ಮುಕ್ತಿಮಂದಿರ ಕ್ಷೇತ್ರಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಲಿಂ. ಶ್ರೀಗಳ ಗದ್ದುಗೆಗೆ ಪೂಜೆ, ಮಂಗಳಾರತಿ ಹಾಗೂ ಧ್ಯಾನ ನೆರವೇರಿಸಿ ಮನಃಪೂರ್ವಕವಾಗಿ ಬೇಡಿಕೆ ಸಲ್ಲಿಸಿದ್ದರು ಎಂದು ಅವರು ಹೇಳಿದ್ದಾರೆ.
ಲಿಂ. ಶ್ರೀಗಳ ಪವಾಡದ ಅರಿವು ಡಿಕೆಶಿ ಅವರಿಗೆ ಇದ್ದು, ತಮ್ಮ ಸಂಕಲ್ಪ ಸಿದ್ಧಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದರು. ಅಂದು “ಲಿಂ. ಶ್ರೀಗಳ ಆಶೀರ್ವಾದದಿಂದ ಅವರು ಅಂದುಕೊಂಡ ಹುದ್ದೆ ಶೀಘ್ರದಲ್ಲೇ ದೊರೆಯಲಿದೆ” ಎಂದು ಆಶೀರ್ವಾದ ಮಾಡಿ ಕಳುಹಿಸಿದ್ದಾಗಿ ಶ್ರೀಗಳು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ ಅವರು ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅಧಿಕಾರ ಬಿಟ್ಟು ಕೊಡುವಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ಎಲ್ಲ ವರ್ಗಗಳನ್ನು ಸಮನ್ವಯದಿಂದ ಕೊಂಡೊಯ್ಯುವ ಶಕ್ತಿಯನ್ನು ಲಿಂ. ಜಗದ್ಗುರು ವೀರಗಂಗಾಧರರು ಡಿಕೆಶಿಗೆ ಕರುಣಿಸಲಿ ಎಂದು ಶ್ರೀಗಳು ಆಶಿಸಿದ್ದಾರೆ.



