ಬೆಂಗಳೂರು: ಪತಿ-ಪತ್ನಿ ಪ್ರಕರಣದಡಿ ಸಶಸ್ತ್ರ ಮೀಸಲು ಪಡೆಯ (ಎಆರ್ಪಿ) 9 ಮಂದಿ ಕಾನ್ಸ್ಟೇಬಲ್ಗಳನ್ನು ಅಂತರ್ ಜಿಲ್ಲಾ ಹಾಗೂ ಘಟಕ ಮಟ್ಟದಲ್ಲಿ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಅಂತರ್ ಜಿಲ್ಲಾ ಅಥವಾ ಘಟಕ ವರ್ಗಾವಣೆಗಾಗಿ ಇಲಾಖೆಯ ಅಧಿಕೃತ ಪೋರ್ಟಲ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಸ್ವಂತ ಕೋರಿಕೆ ಮೇರೆಗೆ ಸೇವಾ ಜೇಷ್ಠತೆ (ಬಡ್ತಿ) ಹಕ್ಕನ್ನು ಬಿಟ್ಟುಕೊಡುವ ಷರತ್ತಿನಡಿ, ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ್ದ ಕಾನ್ಸ್ಟೇಬಲ್ಗಳಿಗೆ ವರ್ಗಾವಣೆ ಮಂಜೂರು ಮಾಡಲಾಗಿದೆ.
ವರ್ಗಾವಣೆಗೊಂಡವರಲ್ಲಿ ಸಿ.ಎಸ್. ಶಿವಕುಮಾರಯ್ಯ, ಇಮ್ರಾನ್ ಪಟೇಲ್, ರಾಘವೇಂದ್ರ, ಹನುಮಂತರಾವ್, ಬ್ರಹ್ಮಾನಂದ ಕೋಟ್ರಪ್ಪ, ಪ್ರಸನ್ನ ಕುಮಾರ್, ಕೆ. ತಿಪ್ಪೇಶ್, ಆನಂದ ಹಾಗೂ ರಾಜು ಸೇರಿದ್ದಾರೆ.
ವರ್ಗಾವಣೆ ಜಾರಿಗೆ ಮುನ್ನ ಸಂಬಂಧಿತ ಅಧಿಕಾರಿಗಳು ವಿವಾಹ ನೋಂದಣಿ ಪ್ರಮಾಣಪತ್ರ ಹಾಗೂ ಸೇವಾ ದೃಢೀಕರಣ ಪತ್ರಗಳ ಮೂಲ ಪ್ರತಿಗಳನ್ನು ಪರಿಶೀಲಿಸಿ, ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದರ ಜೊತೆಗೆ, ವರ್ಗಾವಣೆಗೊಳ್ಳುವ ಸಿಬ್ಬಂದಿಯ ವಿರುದ್ಧ ಯಾವುದೇ ಚಾಲ್ತಿ ಶಿಕ್ಷೆ ಅಥವಾ ಇಲಾಖಾ ವಿಚಾರಣೆ ಬಾಕಿ ಇರಬಾರದು. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಿದ್ದರೆ ಅಗತ್ಯ ಪ್ರಮಾಣಪತ್ರಗಳನ್ನು ಪಡೆದು ಪರಿಶೀಲನೆ ನಡೆಸಿದ ಬಳಿಕವೇ ಹೊಸ ಕರ್ತವ್ಯ ಸ್ಥಳದಲ್ಲಿ ವರದಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ಆಡಳಿತ ವಿಭಾಗದ ಎಡಿಜಿಪಿ ಸೌಮೇಂದು ಮುಖರ್ಜಿ ಅಧಿಕೃತ ಆದೇಶ ಹೊರಡಿಸಿದ್ದಾರೆ.



