ವಿಜಯಸಾಕ್ಷಿ ಸುದ್ದಿ, ಗದಗ: ಯುವ ಪೀಳಿಗೆಗೆ ಧರ್ಮ ಸಂಸ್ಕಾರ, ಧರ್ಮ ಶಿಕ್ಷಣ ಹಾಗೂ ಸನಾತನ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಇಂದಿನ ಕಾಲದ ತುರ್ತು ಅಗತ್ಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಪ್ರವೀಣ ಬೆನ್ನೂರ ಹೇಳಿದರು.
ನಗರದ ರಾಜೀವ ಗಾಂಧಿ ನಗರದ ನವಲೆ ಕಟ್ಟಡದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಭಾವಸಾರ ವ್ಹಿಜನ್ ಇಂಡಿಯಾ ಗದಗ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶೇಷ ಹಿಂದೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಧರ್ಮ ವಿಮುಖತೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಾಲ್ಯದಿಂದಲೇ ಮಕ್ಕಳಿಗೆ ಧರ್ಮ ಶಿಕ್ಷಣ, ರಾಷ್ಟ್ರಭಕ್ತಿ ಮತ್ತು ಭಾರತೀಯ ಸಂಸ್ಕಾರಗಳನ್ನು ಬಿತ್ತುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಲವ್ ಜಿಹಾದ್’ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಸಮಾಜ ಎಚ್ಚರಗೊಳ್ಳಬೇಕು. ಮಹಿಳೆಯರು ಮತ್ತು ಯುವತಿಯರಲ್ಲಿ ಧರ್ಮರಕ್ಷಣೆ, ಸ್ವಸಂರಕ್ಷಣೆ ಹಾಗೂ ಆತ್ಮಗೌರವದ ಜಾಗೃತಿ ಮೂಡಿಸಲು ‘ರಣರಾಗಿಣಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಭಾವಸಾರ ವ್ಹಿಜನ್ ಇಂಡಿಯಾದ ನಿರ್ದೇಶಕ ಅಶ್ವಥ್ ಸುಲಾಖೆ, ಸನಾತನ ಧರ್ಮದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸನಾತನ ಸಂಸ್ಥೆಯ ಸಾಧಕಿ ಜಯಶ್ರೀ ಹೆಬಸೂರ ಮಾತನಾಡಿ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದೊಂದಿಗೆ ಸನಾತನ ಸಂಸ್ಥೆ ಧರ್ಮ ಜಾಗೃತಿ ಹಾಗೂ ಭಾರತೀಯ ಸಂಸ್ಕಾರದ ಉಳಿವಿಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಭಾವಸಾರ ವ್ಹಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗದಗ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಪರಶುರಾಮ ಮಹೇಂದ್ರಕರ, ಸಮಾಜ ಟ್ರಸ್ಟ್ ಸದಸ್ಯ ತುಕಾರಾಮ ಬೇಂದ್ರೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ವಿಜಯಾ ಪರಶುರಾಮ ನವಲೆ ದಂಪತಿಯನ್ನು ಸನ್ಮಾನಿಸಲಾಯಿತು.
ಭಾಗ್ಯಶ್ರೀ ನವಲೆ ಪ್ರಾರ್ಥಿಸಿದರು. ರಾಘವೇಂದ್ರ ನವಲೆ ಸ್ವಾಗತಿಸಿದರು. ರಾಜು ಕಪಟಕರ ಕಾರ್ಯಕ್ರಮ ನಿರೂಪಿಸಿದರು. ಸುಧಾ ವೈಕುಂಠೆ ವಂದಿಸಿದರು.
ಜೆ.ಡಿ. ಉತ್ತರಕರ, ರಾಜೇಂದ್ರ ತ್ರಿಮಲ್ಲೆ, ಈರಣ್ಣ ಬೆಳಮಕರ, ಷಣ್ಮುಖ ಸುಲಾಖೆ, ನಾಗರಾಜ ವಾದೋನೆ, ವೀಣಾ ಸುಲಾಖೆ, ಸುರೇಖಾ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ದ್ಯಾಮಕ್ಕ ಬಸೆಟ್ಟಿ, ಅಕ್ಕಮ್ಮ ಅಬ್ಬಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಧರ್ಮ ಶಿಕ್ಷಣ ಮತ್ತು ಭಾರತೀಯ ಸಂಸ್ಕಾರಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ನೀಡಿದರೆ ಮಾತ್ರ ಸಮಾಜದ ಭವಿಷ್ಯ ಸುರಕ್ಷಿತವಾಗಿರುತ್ತದೆ.”
ಪ್ರವೀಣ ಬೆನ್ನೂರ



