HomeKarnataka Newsಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ: ಸಿಎಂ ಡಿ.ಕೆ. ಶಿವಕುಮಾರ್

ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯ: ಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯದಂತ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ತಮಿಳುನಾಡು ಸರ್ಕಾರ ನಿಮ್ಮ ಹೃದಯಕ್ಕೆ ಹತ್ತಿರವಾದ ಮೇಕೆದಾಟು ಯೋಜನೆ ತಡೆಯಲು ಕಾನೂನು ಅವಕಾಶ ಹುಡುಕುತ್ತಿದೆ ಎಂದು ಕೇಳಿದಾಗ, “ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಮಾತ್ರ ಹತ್ತಿರವಾಗಿಲ್ಲ. ಮೇಕೆದಾಟು ಯೋಜನೆ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ ನೀಡಲಿದೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡಲು ನಾವು ಸಿದ್ಧವಾಗಿದ್ದೇವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಈ ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ” ಎಂದು ತಿಳಿಸಿದರು.

ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ

“ನಾವು ತಮಿಳುನಾಡಿನ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಲಾಗುವುದು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ನಾವು ಕೃಷ್ಣಾದಿಂದ ನೀರನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ರದ್ದುಗೊಳಿಸಲು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, “ತಮಿಳುನಾಡಿನವರು ಕಳೆದ 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ.

ಅವರು ಕೆಳ ಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರ ನೆಲದಲ್ಲಿ ಅವರು ನಿರ್ಮಿಸಿಕೊಳ್ಳುತ್ತಿದ್ದಾರೆ. ಇದೇ ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ” ಎಂದರು.

ತಮಿಳುನಾಡು ಜೊತೆ ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ

ಈ ವಿಚಾರವಾಗಿ ತಮಿಳುನಾಡು ಜೊತೆ ಚರ್ಚೆ ಮಾಡುತ್ತೀರಾ ಎಂದು ಕೇಳಿದಾಗ, “ಯಾವಾಗ ಬೇಕಾದರೂ ಅವರ ಜೊತೆ ಮಾತನಾಡಲು ಸಿದ್ಧನಿದ್ದೇನೆ, ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕ ಜನರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರನ್ನು ಹರಿಸಲು ನೆರವಾಗುತ್ತದೆ. ಅತಿ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ” ಎಂದು ತಿಳಿಸಿದರು.

ನಮ್ಮ ಎಲ್ಲಾ ಸಂಸದರು ಒಗ್ಗಟ್ಟಾಗಿ ಹೋರಾಡುವ ವಿಶ್ವಾಸವಿದೆ

ತಮಿಳುನಾಡು ಅನಗತ್ಯ ಕ್ಯಾತೆ ತೆಗೆಯುತ್ತಿಲ್ಲವೇ ಎಂದು ಕೇಳಿದಾಗ, “ಅವರು ರಾಜಕೀಯ ಉಳಿವಿಗಾಗಿ ಧ್ವನಿ ಎತ್ತುತ್ತಿದ್ದಾರೆ. ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಬಂದ ಬಳಿಕ ಮತ್ತೇನಿದೆ? ಕರ್ನಾಟಕ 177 ಟಿಎಂಸಿ ನೀರು ಬಿಡಬೇಕು ಎಂದು ನೀಡಿದ ನಿರ್ದೇಶನವನ್ನು ನಾವು ಒಪ್ಪಿಕೊಳ್ಳಲಿಲ್ಲವೇ?” ಎಂದು ತಿಳಿಸಿದರು.

ರಾಜ್ಯದ ಬಿಜೆಪಿ ಸಂಸದರು ಇದರ ಬಗ್ಗೆ ಹೋರಾಟ ಮಾಡಬೇಕಲ್ಲವೇ ಎಂದಾಗ, “ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನಮಗಿದೆ” ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ನಿಮ್ಮ ಮೈತ್ರಿ ಇದೆ ಎಂದು ಕೇಳಿದಾಗ, “ನಾವು ಅವರಿಗೆ ಏನು ಮನವಿ ಮಾಡಬೇಕೋ ಮನವಿ ಮಾಡುತ್ತೇವೆ. ಇಲ್ಲಿ ರಾಜಕಾರಣ ಏನಿಲ್ಲ. ಎರಡು ರಾಜ್ಯಗಳ ಜನರ ಹಿತ ಕಾಪಾಡಿಕೊಂಡು ಹೋಗೋಣ” ಎಂದರು.

ಪರಿಷತ್ ಚುನಾವಣೆ ಅಡ್ಡಮತದಾನದ ಅಗತ್ಯವಿಲ್ಲ

ಪರಿಷತ್ ಚುನಾವಣೆಯಲ್ಲಿ ಬಹಳಷ್ಟು ತಂತ್ರಗಾರಿಕೆ ಮಾಡಲಾಗಿದೆ ಎಂದು ಕೇಳಿದಾಗ, “ನಾವು ಯಾವುದೇ ತಂತ್ರಗಾರಿಕೆ ಮಾಡಿಲ್ಲ. ಅದರ ಅವಶ್ಯಕತೆ ಇಲ್ಲ. ಎಲ್ಲರೂ ಪ್ರಜ್ಞಾವಂತರು, ಬುದ್ಧಿವಂತರಿದ್ದು, ಜನರ ಪ್ರತಿನಿಧಿಗಳಾಗಿದ್ದಾರೆ. ಅವರು ತಮ್ಮ ಸ್ವಇಚ್ಛೇ ಮೇಲೆ ಯಾರಿಗೆ ಮತ ಹಾಕಬೇಕೋ ಹಾಕಿದ್ದಾರೆ. ನಾನು ನಮ್ಮ ಶಾಸಕರ ಜೊತೆ ಎರಡು ದಿನ ಕಾಲ ಕಳೆದಿದ್ದೇನೆ ಹೊರತು, ಬೇರೆ ಯಾವ ತಂತ್ರಗಾರಿಕೆ ಮಾಡಿಲ್ಲ” ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ನಡೆದಿದೆ ಎಂಬ ವಿಚಾರವಾಗಿ ಕೇಳಿದಾಗ, “ನಾವು ಯಾವುದೇ ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ, ಅದರ ಬಗ್ಗೆ ಮಾಹಿತಿಯೂ ಇಲ್ಲ. ಇದು ರಹಸ್ಯ ಮತವಾಗಿದ್ದು, ಫಲಿತಾಂಶ ಬರುವವರೆಗೂ ಕಾಯೋಣ. ಅಡ್ಡಮತದಾನ ಯಾವ ಕಾರಣಕ್ಕೆ ಆಗುತ್ತದೆ? ನಮ್ಮ ಶಾಸಕರ ಮತವನ್ನು ನಮ್ಮ ಅಭ್ಯರ್ಥಿಗೆ ಹಾಕುವಂತೆ ಕೇಳಿಕೊಂಡಿದ್ದೇವೆ. ಅಭ್ಯರ್ಥಿಗಳು ಏನೇನು ಮಾಡಿಕೊಂಡಿದ್ದಾರೋ ಗೊತ್ತಿಲ್ಲ” ಎಂದರು.

ರೆಸಾರ್ಟ್ ಸೇರಿದ್ದರ ಬಗ್ಗೆ ಕೇಳಿದಾಗ, “ಪರಿಷತ್ ಚುನಾವಣೆಯಲ್ಲಿ ಹೇಗೆ ಮತದಾನ ಮಾಡಬೇಕು ಎಂದು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದೇವೆ. ಇಲ್ಲಿ ಆದ್ಯತೆ ಮತ ಚಲಾವಣೆಯಲ್ಲಿ ಗುರುತು ಮಾಡುವಾಗ ಅನೇಕ ವ್ಯತ್ಯಾಸಗಳಾಗುತ್ತವೆ. ನಮ್ಮಲ್ಲಿ 60-70 ಶಾಸಕರು ಹೊಸಬರಾಗಿದ್ದು, ಅವರಿಗೆ ಆದ್ಯತೆ ಮತದ ಬಗ್ಗೆ ಅರಿವು ಮೂಡಿಸಿದ್ದೇವೆ. ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸುಮಾರು 7-8 ಸಾವಿರ ಮತಗಳು ತಿರಸ್ಕೃತಗೊಳ್ಳುತ್ತವೆ” ಎಂದು ತಿಳಿಸಿದರು.

ಬಿಜೆಪಿ ಉಚ್ಛಾಟಿತ ಶಾಸಕರು ನಿಮ್ಮ ಜೊತೆ ಕಾಣಿಸಿಕೊಂಡಿದ್ದಾರೆ ಎಂದು ಕೇಳಿದಾಗ, “ರಾಜ್ಯದ 224 ಶಾಸಕರೂ ನನ್ನ ಜೊತೆ ಆತ್ಮೀಯರಾಗಿದ್ದಾರೆ. ನಾನು 224 ಶಾಸಕರಿಗೂ ಮುಖ್ಯಮಂತ್ರಿ. ನಾನು ಒಂದು ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ಎಲ್ಲರೂ ನಮ್ಮ ಸಹೋದರರೇ” ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಇದ್ದೇವೆ ಎಂದು ತಿಳಿಸಿದ್ದಾರೆ ಎಂದು ಕೇಳಿದಾಗ, “ಇದು ಗೌಪ್ಯ ಮತದಾನವಾಗಿರುವುದರಿಂದ ಅವರು ಯಾರಿಗೆ ಮತ ಹಾಕಿದ್ದಾರೆ ಎಂದು ನಮಗೆ ಗೊತ್ತಿಲ್ಲ. ನಾನು ದುರ್ಬಿನು ಹಾಕಿ ನೋಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಅಸೂಯೆಗೆ ಮದ್ದಿಲ್ಲ

ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಅಸಂಬದ್ಧ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ರೀತಿ ಮಾತನಾಡುವುದು ಅವರ ಮಟ್ಟಕ್ಕೆ ಸರಿಯಲ್ಲ ಅಥವಾ ಈ ಮಟ್ಟಕ್ಕೆ ಇಳಿದು ಅವರು ಮಾತನಾಡಬಾರದು. ಈ ಮಾತುಗಳು ಅವರ ಘನತೆಗೆ ಸೂಕ್ತವಾದುದಲ್ಲ. ಅವರು ತಮ್ಮ ಹಿರಿತನ ಕಾಪಾಡಿಕೊಂಡು ಹೋದರೆ ಒಳ್ಳೆಯದು. ಅಸೂಯೆಗೆ ಮದ್ದಿಲ್ಲ ಎಂದಷ್ಟೇ ನಾನು ಹೇಳಬಹುದು” ಎಂದು ತಿಳಿಸಿದರು. ದೆಹಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದಾಗ, “ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದೇನೆ” ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!