ವಿಜಯಸಾಕ್ಷಿ ಸುದ್ದಿ, ಗದಗ: ದಿಕ್ಷೀತಾ ಎಂಟರ್ಪ್ರೈಸಸ್ ಬೆಂಗಳೂರು ನಿರ್ಮಾಣದ ಬಹುನಿರೀಕ್ಷಿತ ಕನ್ನಡ ಚಿತ್ರ ‘ಕಾಲಘಟ್ಟ’ದ ಎರಡನೇ ಲಿರಿಕಲ್ ವೀಡಿಯೊ ಸಾಂಗ್ “ಸಮಯವು ನಿನ್ನ ಬದುಕಿನ ಮಾಲಿಕ, ಕಾಲಕ್ಕೆ ಗೌರವ ಕೊಡಬೇಕು ಜನಕ” ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರದ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 1.80 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ಸಿನಿಪ್ರಿಯರ ಗಮನ ಸೆಳೆದಿದೆ. ಸಮಯದ ಮಹತ್ವವನ್ನು ಅರ್ಥಪೂರ್ಣ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಹೇಳುವ ಈ ಹಾಡು ಯುವಜನತೆ ಸೇರಿದಂತೆ ಎಲ್ಲ ವಯೋಮಾನದವರ ಮೆಚ್ಚುಗೆಗೆ ಪಾತ್ರವಾಗಿದೆ.
ಹಾಡಿಗೆ ಋಷಿ ಸಾಹಿತ್ಯ ರಚಿಸಿದ್ದು, ಗಾಯಕ ಮಹೇಶ್ ತಮ್ಮ ಸುಮಧುರ ಕಂಠದ ಮೂಲಕ ಜೀವ ತುಂಬಿದ್ದಾರೆ. ಸಂಗೀತ ನಿರ್ದೇಶಕ ಎ.ಎಂ. ನೀಲ್ ಅವರ ಸಂಗೀತ ಸಂಯೋಜನೆ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.
ಚಿತ್ರದಲ್ಲಿ ಅಭಿದಾಸ್ ಹಾಗೂ ನಿತಿಲ್ ನಾಯಕ ಪಾತ್ರಗಳಲ್ಲಿ ಅಭಿನಯಿಸಿದ್ದು, ಖುಷಿ ಮತ್ತು ಮೇಘಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ಶೋಭರಾಜ್, ಭವ್ಯ, ರಮೇಶ್ ಭಟ್, ಪ್ರಶಾಂತ್ ರವಿ ಹಾಗೂ ಮಂಡ್ಯ ಸೀತಾರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಹಲವಾರು ರಂಗಭೂಮಿ ಹಾಗೂ ಹಾಸ್ಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನು ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್, ಸಂಕಲನವನ್ನು ವೆಂಕಿ ಯುಡಿವಿ, ಸಾಹಸ ನಿರ್ದೇಶನವನ್ನು ಮಾಸ್ ಮಾದ ನಿರ್ವಹಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಕೆ. ಪ್ರಕಾಶ್ ಅಂಬಳೆ ವಹಿಸಿಕೊಂಡಿದ್ದಾರೆ. ಲಯನ್ ಚಿಕ್ಕೇಗೌಡ ಹಾಗೂ ಟಿ.ಸಿ. ತಳಗವಾಡಿ ಚಿತ್ರ ನಿರ್ಮಾಪಕರಾಗಿದ್ದಾರೆ.
ಜೂನ್ 19ರಂದು ರಾಜ್ಯಾದ್ಯಂತ ‘ಕಾಲಘಟ್ಟ’ ಚಿತ್ರ ಬಿಡುಗಡೆಯಾಗಲಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ.
“ಕಾಲದ ಮಹತ್ವವನ್ನು ಪ್ರತಿಯೊಬ್ಬರಿಗೂ ನೆನಪಿಸುವ ಉದ್ದೇಶದಿಂದ ಈ ಹಾಡನ್ನು ರೂಪಿಸಿದ್ದೇವೆ. ಯುವಜನತೆಗೆ ಹಾಗೂ ಕುಟುಂಬದ ಎಲ್ಲರಿಗೂ ಇದು ಉತ್ತಮ ಸಂದೇಶ ನೀಡಲಿದೆ.”
– ಕೆ. ಪ್ರಕಾಶ್ ಅಂಬಳೆ, ನಿರ್ದೇಶಕರು



