HomeGadag Newsಹೆಚ್.ಕೆ. ಪಾಟೀಲರಿಲ್ಲದ ಸಂಪುಟ ಎಂದರೆ ಅಲ್ಲಮಪ್ರಭು ಇಲ್ಲದ ಅನುಭವ ಮಂಟಪ!

ಹೆಚ್.ಕೆ. ಪಾಟೀಲರಿಲ್ಲದ ಸಂಪುಟ ಎಂದರೆ ಅಲ್ಲಮಪ್ರಭು ಇಲ್ಲದ ಅನುಭವ ಮಂಟಪ!

For Dai;y Updates Join Our whatsapp Group

Spread the love

ಕರ್ನಾಟಕ ಕಂಡ ಮುತ್ಸದ್ಧಿ, ಸುಸಂಸ್ಕೃತ, ಅಧ್ಯಯನಶೀಲ, ಸಂವೇದನಾಶೀಲ ಹಾಗೂ ಪ್ರಜೆಗಳ ಅಂತರಂಗದ ತಂತುಗಳನ್ನು ಬಲ್ಲ ಅಪರೂಪದ ರಾಜಕಾರಣಿಗಳಲ್ಲಿ ಡಾ. ಎಚ್.ಕೆ. ಪಾಟೀಲರು ಒಬ್ಬರು. ಅವರಿಲ್ಲದ ಸಚಿವ ಸಂಪುಟವು ಅಲ್ಲಮಪ್ರಭು ಇಲ್ಲದ ಅನುಭವ ಮಂಟಪದಂತಾಗುತ್ತದೆ ಎಂಬುದು ಅವರ ಅಭಿಮಾನಿ ಬಳಗದ ಒಕ್ಕೂರಲಿನ ಅಭಿಪ್ರಾಯವಾಗಿದೆ. ಜೂನ್ 16ರಂದು ಗದಗದಲ್ಲಿ ನಡೆದ ವಿಭಿನ್ನ ಹೋರಾಟವು ಕೇವಲ ಬೇಡಿಕೆಯಲ್ಲ, ಪಕ್ಷದ ಹೈಕಮಾಂಡ್ ವಿರುದ್ಧದ ಸಾತ್ವಿಕ ಸಿಟ್ಟಿನ ಅಭಿವ್ಯಕ್ತಿಯೂ ಆಗಿತ್ತು.

ನಾಡಿನ ಏಳ್ಗೆಗಾಗಿ ಮಾನವೀಯ ಮೌಲ್ಯಗಳೊಂದಿಗೆ ಕೆಲಸ ಮಾಡಿರುವ ಎಚ್.ಕೆ. ಪಾಟೀಲರು ಸದನದ ಒಳಗೆ ಮತ್ತು ಹೊರಗೆ ಆಡಳಿತದ ಗುಣಮಟ್ಟ ಹೆಚ್ಚಿಸುವ ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಅವರ ಚಿಂತನೆ ಮತ್ತು ಕಾರ್ಯವೈಖರಿಗೆ ವಿರೋಧ ಪಕ್ಷದವರೂ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ.

ಬೃಹತ್ ನೀರಾವರಿ ಸಚಿವರಾಗಿ ಕೃಷ್ಣಾ ಕಣಿವೆ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡಿದ ಅವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕರ್ನಾಟಕದ ವಿವಿಧ ಕಾನೂನುಗಳನ್ನು ಒಟ್ಟುಗೂಡಿಸುವ ಮಹತ್ವದ ಕಾರ್ಯ ಕೈಗೊಂಡರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಕಾರಣಕರ್ತರಾಗಿದ್ದರು.

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸುವ ಕಾರ್ಯಕ್ರಮದ ಸಂಘಟನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅದೇ ಸಂದರ್ಭದಲ್ಲಿ ಕಲಾಂ ಅವರ 11 ಅಂಶಗಳ ಅಭಿವೃದ್ಧಿ ಯೋಜನೆ ಜಾರಿಗೆ ಮುಂದಾಗಿದ್ದ ಕ್ರಮ ಇಂದಿಗೂ ಸ್ಮರಣೀಯವಾಗಿದೆ.

ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ಕರ್ನಾಟಕ ಕಾನೂನು ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗಳಂತಹ ಮಹತ್ವದ ಸಂಸ್ಥೆಗಳ ಸ್ಥಾಪನೆಯ ಶ್ರೇಯಸ್ಸು ಕೂಡ ಅವರಿಗೇ ಸಲ್ಲುತ್ತದೆ. ನ್ಯಾಯಾಂಗ ಇಲಾಖೆ ನೌಕರರ ರಾಜ್ಯ ಮಟ್ಟದ 8ನೇ ಸಮಾವೇಶದಲ್ಲಿ ಸಂಘ ಸಲ್ಲಿಸಿದ್ದ ಹಲವು ಮನವಿಗಳು ಕಾರ್ಯರೂಪಕ್ಕೆ ಬರಲು ಅವರು ನೆರವಾಗಿದ್ದರು.

ಶುದ್ಧ ಕುಡಿಯುವ ನೀರಿನ ಯೋಜನೆ ಹಾಗೂ “ಪ್ರಜೆಗಳಡೆ ಪ್ರಜಾಪ್ರಭುತ್ವ” ಎಂಬ ವಿನೂತನ ಪರಿಕಲ್ಪನೆಯ ಮೂಲಕ ಜನರ ದೂರುಗಳಿಗೆ 24 ಗಂಟೆಯೊಳಗೆ ಸರ್ಕಾರದ ಪ್ರತಿಕ್ರಿಯೆ ದೊರೆಯುವ ವ್ಯವಸ್ಥೆಯನ್ನು ರೂಪಿಸಿದ್ದು ದೇಶದಲ್ಲಿಯೇ ವಿಶಿಷ್ಟ ಪ್ರಯೋಗವೆಂದು ಪರಿಗಣಿಸಲಾಗಿದೆ. ಈ ಯೋಜನೆಗಳು ಎಚ್.ಕೆ. ಪಾಟೀಲರ ಕನಸಿನ ಕೂಸುಗಳಾಗಿವೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಕಲ್ಪಿಸುವ ಪ್ರಕ್ರಿಯೆಯಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸಿದ್ದಲ್ಲದೆ, ಗ್ರಾಮ ಸ್ವರಾಜ್ ಕಾಯ್ದೆ-2015 ಜಾರಿಗೆ ತಂದು 434 ಹೊಸ ಗ್ರಾಮ ಪಂಚಾಯಿತಿಗಳ ಪುನರ್ವಿಂಗಡಣೆಗೆ ಕಾರಣರಾಗಿದ್ದರು. ದೇಶದಲ್ಲೇ ಪ್ರಥಮ ಮಹಾತ್ಮ ಗಾಂಧಿ ಗ್ರಾಮೀಣ ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಗದಗದಲ್ಲಿ ಸ್ಥಾಪಿಸಲು ಅವರು ಶ್ರಮಿಸಿದ್ದರು.

ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಲುಪಿಸಲು ಸದನದ ಕಲಾಪಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ನಾಯಕರಲ್ಲಿ ಎಚ್.ಕೆ. ಪಾಟೀಲರು ಪ್ರಮುಖರು. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಪಕ್ಷದ ಹೈಕಮಾಂಡ್ ಅವರಿಗೆ ಉಪ ಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡಬೇಕೆಂಬುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.

ಒಂದು ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದಾಗ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕರಲ್ಲಿ ಎಚ್.ಕೆ. ಪಾಟೀಲರು ಒಬ್ಬರು. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪಕ್ಷವನ್ನು ಬಲಪಡಿಸುವಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಯಾವುದೇ ಸಮಸ್ಯೆಯ ಆಳವನ್ನು ಅರಿತು ಪರಿಹಾರ ಸೂಚಿಸುವ ಅಪರೂಪದ ಧುರೀಣರಾಗಿರುವ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯಾದ್ಯಂತ ನಡೆಯುತ್ತಿರುವ ಹೋರಾಟಕ್ಕೂ ಇದೇ ಕಾರಣವಾಗಿದೆ. ಇಂತಹ ಶುದ್ಧ ಚಾರಿತ್ರ್ಯವುಳ್ಳ ನಾಯಕರಿಂದ ಸದನದ ಘನತೆ ಹೆಚ್ಚುತ್ತದೆ. ಗದಗ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

– ಎ.ಎಸ್. ಮಕಾನದಾರ
ಕವಿ ಹಾಗೂ ಪ್ರಕಾಶಕ, ಗದಗ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!