ವಿಜಯಸಾಕ್ಷಿ ಸುದ್ದಿ, ಗದಗ: ಸಿದ್ದಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು ಇಂದು ವೈದ್ಯೆಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ 2005-06ನೇ ಸಾಲಿನ ಹಳೆ ವಿದ್ಯಾರ್ಥಿನಿ ಡಾ. ಮಂಜುಳಾ ಸುರೇಬಾಣವರ, ತಮ್ಮ ತವರು ಶಾಲೆಗೆ ಪ್ರೊಫೆಷನಲ್ ಪೋರ್ಟೆಬಲ್ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿ ಶಾಲೆಯೊಂದಿಗಿನ ಬಾಂಧವ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಶಾಲೆಯು ನನಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳನ್ನು ಕಲಿಸಿಕೊಟ್ಟಿದೆ. ನನ್ನ ಯಶಸ್ಸಿನ ಹಿಂದೆ ಈ ಶಾಲೆ ಮತ್ತು ಶಿಕ್ಷಕರ ಪಾತ್ರ ಅಪಾರವಾಗಿದೆ. ಶಾಲೆಯ ಋಣವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಿಲ್ಲ. ಆದರೆ ಕೃತಜ್ಞತೆಯ ಸಂಕೇತವಾಗಿ ಈ ಸಣ್ಣ ದೇಣಿಗೆಯನ್ನು ನೀಡಿದ್ದೇನೆ” ಎಂದು ಹೇಳಿದರು.
ಶಾಲೆಯ ಹಳೆಯ ನೆನಪುಗಳನ್ನು ಹಂಚಿಕೊಂಡ ಅವರು, ಕಳೆದ ಎರಡು ದಶಕಗಳಲ್ಲಿ ಶಾಲೆಯು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಬದುಕಿಗೆ ದಾರಿ ತೋರಿದ ಎಲ್ಲ ಶಿಕ್ಷಕರಿಗೆ ಹಾಗೂ ಪ್ರಸ್ತುತ ಶಿಕ್ಷಕ ವೃಂದಕ್ಕೆ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸಿದರು.
ಕಿರಿಯ ಶಿಕ್ಷಕಿ ಶಂಕ್ರಮ್ಮ ಹಣಮಗೌಡ್ರ ಮಾತನಾಡಿ, ಹಳೆ ವಿದ್ಯಾರ್ಥಿಗಳು ಶಾಲೆಗೆ ಬಂದು ತಮ್ಮ ಪ್ರೀತಿ, ಅಭಿಮಾನ ವ್ಯಕ್ತಪಡಿಸಿದಾಗ ಶಿಕ್ಷಕರಿಗೆ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ದೊರೆಯುವ ಅತಿ ದೊಡ್ಡ ಗೌರವ ಎಂದರು.
ಹಿರಿಯ ಶಿಕ್ಷಕಿ ಜಯಲಕ್ಷ್ಮಿ ಅಣ್ಣಿಗೇರಿ ಮಾತನಾಡಿ, ಸರ್ಕಾರಿ ಶಾಲೆಗಳ ನಿಜವಾದ ಆಸ್ತಿ ವಿದ್ಯಾರ್ಥಿಗಳೇ. 20 ವರ್ಷಗಳ ಬಳಿಕ ಶಾಲೆಗೆ ಆಗಮಿಸಿ ಬೆಲೆಬಾಳುವ ಹೈಟೆಕ್ ಸ್ಪೀಕರ್ ದೇಣಿಗೆ ನೀಡಿರುವ ಡಾ. ಮಂಜುಳಾ ಅವರ ಕಾರ್ಯ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಡಾ. ಮಂಜುಳಾ ಸುರೇಬಾಣವರ ಹಾಗೂ ಅವರ ಕುಟುಂಬವನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ಶಾಲೆಯ ನೆನಪುಗಳನ್ನು ಮರೆಯದ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಗಳ ನಿಜವಾದ ಹೆಮ್ಮೆ. ಡಾ. ಮಂಜುಳಾ ಅವರಂತಹ ಹಳೆ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು.”
– ಜಯಲಕ್ಷ್ಮಿ ಅಣ್ಣಿಗೇರಿ, ಹಿರಿಯ ಶಿಕ್ಷಕಿ



