ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದ ಮತ್ತು ಸಹೋದರತೆಯ ಮನೋಭಾವದಿಂದ ಆಚರಿಸಬೇಕು ಎಂದು ಪಿಎಸ್ಐ ನಾಗರಾಜ ಗಡದ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಹಲವು ದಶಕಗಳಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಸಹೋದರ ಭಾವದಿಂದ ಮೊಹರಂ ಆಚರಿಸುತ್ತಾ ಬಂದಿದ್ದು, ಈ ಬಾರಿಯೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಲಾಗುವುದು. ಸಮಾಜದಲ್ಲಿ ನೆಮ್ಮದಿ ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಬ್ಬದ ಹೆಸರಿನಲ್ಲಿ ಶಾಂತಿಗೆ ಭಂಗ ತರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಇ-ಚಲನ್ ದಂಡ ಪಾವತಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇ.50 ರಿಯಾಯಿತಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಜೂನ್ 21ರಿಂದ ಜುಲೈ 10ರವರೆಗೆ ಈ ಸೌಲಭ್ಯ ಲಭ್ಯವಿರಲಿದೆ ಎಂದರು.
ಶಿಗ್ಲಿ ಕ್ರಾಸ್ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರ ಪರವಾಗಿ ಪೂರ್ಣಾಜಿ ಕರಾಟೆ, ಗಂಗಾಧರ ಮೆಣಸಿನಕಾಯಿ, ಎಂ.ಐ. ಮುಳಗುಂದ, ಅಮರೀಶ ತೆಂಬದಮನಿ ಹಾಗೂ ಬಸವರಾಜ ಕಲ್ಲೂರ ಮಾತನಾಡಿದರು.
ಸಭೆಯಲ್ಲಿ ಸುಲೇಮಾನಸಾಬ್ ಕಣಕೆ, ಅಬ್ದುಲಸಾಬ್ ಬೆಟಗೇರಿ, ಎಂ.ಎಚ್. ಶಮಲೆವಾಲೆ, ಭೀಮಣ್ಣ ಯಂಗಾಡಿ, ಮರಿಯಪ್ಪ ಭಜಂತ್ರಿ, ಅಕ್ಬರಸಾಬ್ ಸುಂಡಕೆ, ಮಲ್ಲಿಕಾರ್ಜುನ ವಾರದ, ಡಿ.ಬಿ. ಫಕ್ಕೀರಪ್ಪ, ಮುತ್ತಣ್ಣ ಪೂಜಾರ, ಜಾಫರ್ ಲಕ್ಷ್ಮೇಶ್ವರ, ಖಾಜಾಪೀರ ಜಮಖಂಡಿ, ನೂರಅಹ್ಮದ ಶಿದ್ದಿ, ಮಂಜಪ್ಪ ವಡ್ಡರ, ದಾದಾಪೀರ ತಂಬಾಕ, ಇರ್ಫಾನ ಮಿರ್ಜಾ, ಮುತ್ತು ನೀರಲಗಿ ಸೇರಿದಂತೆ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಪ್ರಕಾಶ ಮ್ಯಾಗೇರಿ ನಿರೂಪಿಸಿದರು.
“ಹಬ್ಬಗಳು ಜನರನ್ನು ಒಗ್ಗೂಡಿಸುವ ಸೇತುವೆಗಳಾಗಬೇಕು, ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ.”
– ನಾಗರಾಜ ಗಡದ, ಪಿಎಸ್ಐ, ಲಕ್ಷ್ಮೇಶ್ವರ



