ಬೆಂಗಳೂರು: ಕೇಂದ್ರ ಸರ್ಕಾರದ ‘ವಾಹನ್-4’ ಸಾಫ್ಟ್ವೇರ್ನಲ್ಲಿ ಉಂಟಾಗಿರುವ ತಾಂತ್ರಿಕ ದೋಷದಿಂದ ರಾಜ್ಯದ ವಾಹನ ಸವಾರರು ಹಾಗೂ ಹೊಸ ವಾಹನ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದು ವಾರದಿಂದ ಸಾಫ್ಟ್ವೇರ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ, ರಾಜ್ಯದ 70 ಆರ್ಟಿಓ ಕಚೇರಿಗಳಲ್ಲಿ ದೈನಂದಿನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆರ್ಟಿಓ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಸಿಸ್ಟಮ್ ಹ್ಯಾಂಗ್ ಆಗುತ್ತಿದ್ದು, ಹಲವು ಪ್ರಮುಖ ಸೇವೆಗಳು ಸ್ಥಗಿತಗೊಂಡಿವೆ.
ತಾಂತ್ರಿಕ ಸಮಸ್ಯೆಯಿಂದಾಗಿ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ವಿಳಂಬವಾಗುತ್ತಿದೆ. ಅಲ್ಲದೆ ವಾಹನ ಮಾಲೀಕತ್ವ ವರ್ಗಾವಣೆ, ಬ್ಯಾಂಕ್ ಸಾಲದ ಎಂಟ್ರಿ ಹಾಗೂ ರದ್ದತಿ, ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ), ವಿಳಾಸ ಬದಲಾವಣೆ, ನಕಲಿ ಆರ್ಸಿ ಪಡೆಯುವುದು ಸೇರಿದಂತೆ ಹಲವು ಸೇವೆಗಳು ಲಭ್ಯವಾಗುತ್ತಿಲ್ಲ.
ಹೊರರಾಜ್ಯಗಳಿಗೆ ಸಂಚರಿಸಬೇಕಾದ ಲಾರಿಗಳು ಹಾಗೂ ವಾಣಿಜ್ಯ ವಾಹನಗಳಿಗೆ ಅಗತ್ಯವಿರುವ ಪರ್ಮಿಟ್ ಪಡೆಯಲು ಸಾಧ್ಯವಾಗದ ಕಾರಣ ಸಾರಿಗೆ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಲಾರಿ ಹಾಗೂ ಟ್ಯಾಕ್ಸಿ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ನೂರಾರು ವಾಹನ ಮಾಲೀಕರು ಆರ್ಟಿಓ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಇದುವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪರಿಣಾಮ ಪ್ರತಿದಿನ ನೂರಾರು ನಾಗರಿಕರು ಆರ್ಟಿಓ ಕಚೇರಿಗಳಿಗೆ ಭೇಟಿ ನೀಡಿ ಯಾವುದೇ ಸೇವೆ ಪಡೆಯದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನ್-4 ಸರ್ವರ್ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ರಾಜ್ಯ ಸಾರಿಗೆ ಇಲಾಖೆ ಹಾಗೂ ಕೇಂದ್ರದ ಎನ್ಐಸಿ ತಾಂತ್ರಿಕ ತಂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

