ಬೆಂಗಳೂರು: ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದೇ ಉಂಟಾದ ತಾತ್ಕಾಲಿಕ ಸೇವಾ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಸ್ಪಷ್ಟನೆ ನೀಡಿದೆ.
ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಪ್ರಯಾಣಿಕರೊಬ್ಬರ ಲೋಹದ ಸರ (ಮೆಟಲ್ ಚೈನ್) ಬಾಗಿಲಿನ ಡೋರ್ ಗೈಡ್ವೇಯಲ್ಲಿ ಸಿಲುಕಿದ್ದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ನಿನ್ನೆ ಸಂಜೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಹಿನ್ನೆಲೆಯಲ್ಲಿ ಸಂಜೆ 7.36ರಿಂದ 7.54ರವರೆಗೆ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿತ್ತು. ಘಟನೆ ಬಳಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆ ಕೈಗೊಂಡಿದ್ದವು.
ತನಿಖೆ ವೇಳೆ, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್ವೇಯಲ್ಲಿ ಸಿಲುಕಿಕೊಂಡಿದ್ದರಿಂದ ಬಾಗಿಲು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗಿರಲಿಲ್ಲ ಎಂಬುದು ಪತ್ತೆಯಾಗಿದೆ. ಇದರಿಂದ ಸುರಕ್ಷತಾ ವ್ಯವಸ್ಥೆ ಸಕ್ರಿಯಗೊಂಡು ರೈಲು ಸಂಚಾರದಲ್ಲಿ ಕೆಲಕಾಲ ವಿಳಂಬ ಉಂಟಾಗಿದೆ.
ಘಟನೆ ಬಳಿಕ ರೈಲು ಹಾಗೂ ಬಾಗಿಲಿನ ವ್ಯವಸ್ಥೆಯನ್ನು ಸಂಪೂರ್ಣ ತಾಂತ್ರಿಕವಾಗಿ ಪರಿಶೀಲಿಸಲಾಗಿದ್ದು, ರೈಲಿನ ಉಪಕರಣಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದ್ದು, ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಿರಂತರ ಮೆಟ್ರೋ ಸೇವೆ ಒದಗಿಸುವುದು ನಮ್ಮ ಬದ್ಧತೆಯಾಗಿದೆ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪ್ರಯಾಣಿಕರು ರೈಲು ಏರು-ಇಳಿಯುವ ವೇಳೆ ಬ್ಯಾಗ್, ಬಟ್ಟೆ, ಸರ ಸೇರಿದಂತೆ ಯಾವುದೇ ವಸ್ತುಗಳು ಬಾಗಿಲಿನ ನಡುವೆ ಸಿಲುಕದಂತೆ ಎಚ್ಚರಿಕೆ ವಹಿಸುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.