ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ನಿರ್ಮಿಸಲಾದ ಗಾಂಧಿ ಭವನವು ಖಾಸಗಿ ವಾಹನಗಳ ನಿಲ್ದಾಣ ಹಾಗೂ ದನಗಳನ್ನು ಕಟ್ಟುವ ಸ್ಥಳವಾಗಿ ಮಾರ್ಪಟ್ಟಿದ್ದು, ತಕ್ಷಣ ಸ್ವಚ್ಛತೆ ಕಾಪಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು ಎಂದು ನಿವೃತ್ತ ಸೈನಿಕರ ಸಂಘ ಆಗ್ರಹಿಸಿದೆ.
ಸಂಘದ ಅಧ್ಯಕ್ಷ ಶಿವಪುತ್ರಪ್ಪ ಸಂಗನಾಳ ಅವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ, ಗಾಂಧಿ ಭವನದ ಸುತ್ತಮುತ್ತ ದನಕರುಗಳ ಸಗಣಿ ಹಾಗೂ ಸಾರ್ವಜನಿಕರ ಮಲ-ಮೂತ್ರ ವಿಸರ್ಜನೆಯಿಂದ ದುರ್ವಾಸನೆ ಹರಡುತ್ತಿದ್ದು, ಅಲ್ಲಿಯೇ ಸಂಘದ ಕಚೇರಿ ಕಾರ್ಯನಿರ್ವಹಿಸುವುದರಿಂದ ಮಾಸಿಕ ಸಭೆ ನಡೆಸಲು ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಭವನಕ್ಕೆ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಿಸಿ, ಕಿಟಕಿಗಳು ಹಾಗೂ ಮುಖ್ಯ ದ್ವಾರ ಅಳವಡಿಸಿದರೆ ಜನರು ಮತ್ತು ಜಾನುವಾರುಗಳ ಹಾವಳಿ ತಡೆಯಲು ಸಾಧ್ಯವಾಗುತ್ತದೆ. ಇದರಿಂದ ಭವನದ ಸ್ವಚ್ಛತೆ ಕಾಪಾಡಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 26ರಂದು ಗಾಂಧಿ ಭವನದಲ್ಲೇ ಕಾರ್ಗಿಲ್ ವಿಜಯೋತ್ಸವ ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಅಗತ್ಯ ಮೂಲಸೌಕರ್ಯ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಈ ಮನವಿಗೆ ನಿವೃತ್ತ ಸೈನಿಕರ ಸಂಘದ ಸದಸ್ಯರು ಸಹಿ ಹಾಕಿದ್ದು, ಪಟ್ಟಣ ಪಂಚಾಯಿತಿ ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.