ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ಬಲ್ಲಾಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ವಾರ್ಷಿಕ ಕುಸ್ತಿ ಪಂದ್ಯಾವಳಿಗೆ ಪುರಸಭೆ ಸದಸ್ಯ ಪವಾಡಿ ಹನುಮಂತಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕುಸ್ತಿ ಕೇವಲ ಕ್ರೀಡೆಯಲ್ಲ, ಅದು ಗ್ರಾಮೀಣ ಸಂಸ್ಕೃತಿ, ದೈಹಿಕ ಸಾಮರ್ಥ್ಯ ಹಾಗೂ ಶಿಸ್ತಿನ ಪ್ರತೀಕವಾಗಿದೆ. ಯುವಕರಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಕುಸ್ತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ದಾವಣಗೆರೆ, ಹಾವೇರಿ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೈಲ್ವಾನರು ಸುಮಾರು 15ರಿಂದ 20 ಕುಸ್ತಿಗಳಲ್ಲಿ ಸೆಣಸಾಡಿ ಪ್ರೇಕ್ಷಕರ ಮನರಂಜಿಸಿದರು. ಪರ್ಸಿ ಪೈಕಿ ಫೈನಲ್ ಕುಸ್ತಿಯಲ್ಲಿ ಶರತ್ (ರಾಣೆಬೆನ್ನೂರು) ಹಾಗೂ ವಿಜಯ (ಹರಿಹರ) ನಡುವಿನ ಸೆಣಸಾಟ ಸಮಬಲದಲ್ಲಿ ಅಂತ್ಯಗೊಂಡ ಕಾರಣ ಬೆಳ್ಳಿ ಗದೆ ಪ್ರಶಸ್ತಿ ಈ ಬಾರಿ ನೀಡಲಾಗಲಿಲ್ಲ.
ಕುಸ್ತಿ ಸ್ಪರ್ಧೆ ವೀಕ್ಷಿಸಲು ಸಾವಿರಾರು ಜನರು ಸೇರಿದ್ದು, ಕುಸ್ತಿ ಕಣ ರೋಚಕ ಪೈಪೋಟಿಗೆ ಸಾಕ್ಷಿಯಾಯಿತು. ಪ್ರತಿವರ್ಷ ಕುಸ್ತಿಪಟುಗಳಿಗೆ ಧನಸಹಾಯ ಹಾಗೂ ಸಾರಿಗೆ ಭತ್ಯೆ ನೀಡಿ ಪ್ರೋತ್ಸಾಹಿಸುತ್ತಿರುವ ಗ್ರಾಮಸ್ಥರ ಸೇವೆಯನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೆ. ಮೈಲಾರಪ್ಪ, ದೊಡ್ಡ ಬಸಪ್ಪ, ಡಿಶ್ ಮಂಜುನಾಥ್, ಶಿಖಂದರ್, ಇಮ್ತಿಯಾಜ್, ಪೈಂಟರ್ ಬಾಬು, ಕೆ. ಹುಚ್ಚಪ್ಪ, ಬಲ್ಲಾಹುಣ್ಸಿ ರಾಮಣ್ಣ, ಸಾಹಿರಾಬಾನು, ಎಣ್ಣೆ ದಾದು ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಫಾಜಿಲ್ ಸಾಬ್, ಶಾನುಭೋಗರ ತಿಪ್ಪಣ್ಣ, ಶಾನುಭೋಗರ ನಾಗರಾಜ್, ಬಿಸ್ನಳ್ಳಿ ಕರೀಂಸಾಬ್ ಹಾಗೂ ಪೂಜಾರ್ ಮಂಜುನಾಥ್ ಕಾರ್ಯನಿರ್ವಹಿಸಿದರು.
“ಕುಸ್ತಿ ಯುವಕರಲ್ಲಿ ಧೈರ್ಯ, ಶಿಸ್ತು ಮತ್ತು ಆತ್ಮವಿಶ್ವಾಸ ಬೆಳೆಸುವ ಶ್ರೇಷ್ಠ ಕ್ರೀಡೆ. ಗ್ರಾಮೀಣ ಭಾಗದಲ್ಲಿ ಈ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ.”
– ಪವಾಡಿ ಹನುಮಂತಪ್ಪ, ಪುರಸಭೆ ಸದಸ್ಯ, ಹಗರಿಬೊಮ್ಮನಹಳ್ಳಿ