HomeGadag Newsಎಸ್‌ಐಆರ್–2026 ಜಾಗೃತಿಗೆ ಗದಗ ಜಿಲ್ಲಾಡಳಿತದ ವಿನೂತನ ಹೆಜ್ಜೆ; ಮತದಾನದ ಮಹತ್ವ ಸಾರಿದ ಚಿತ್ರಕಲಾ ಪ್ರದರ್ಶನ

ಎಸ್‌ಐಆರ್–2026 ಜಾಗೃತಿಗೆ ಗದಗ ಜಿಲ್ಲಾಡಳಿತದ ವಿನೂತನ ಹೆಜ್ಜೆ; ಮತದಾನದ ಮಹತ್ವ ಸಾರಿದ ಚಿತ್ರಕಲಾ ಪ್ರದರ್ಶನ

ವಿಜಯಸಾಕ್ಷಿ ಸುದ್ದಿ, ಗದಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್–2026) ಅಂಗವಾಗಿ ಸಾರ್ವಜನಿಕರಲ್ಲಿ ಮತದಾನದ ಹಕ್ಕು, ಜವಾಬ್ದಾರಿ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ವಿಶೇಷ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ “ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರತಿಯೊಬ್ಬ ಮತದಾರನ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂಬ ಸಂದೇಶವನ್ನು ಕಲಾಕೃತಿಗಳ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹಾಗೂ 65-ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಡಾ. ನಂದಾ ಹಣಬರಟ್ಟಿ ಅವರು ಸ್ವತಃ ರಚಿಸಿದ ಸಾಮಾಜಿಕ ಜಾಗೃತಿ ಮತ್ತು ಮತದಾನದ ಮಹತ್ವ ಸಾರುವ ಚಿತ್ರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. ಎಸ್‌ಐಆರ್ ಪ್ರಕ್ರಿಯೆ, ಮತದಾರರ ನೋಂದಣಿ, ಮತದಾನದ ಹಕ್ಕಿನ ಮಹತ್ವ ಹಾಗೂ ಜಾಗೃತ ನಾಗರಿಕನ ಕರ್ತವ್ಯವನ್ನು ಪ್ರತಿಬಿಂಬಿಸುವ ಕಲಾಕೃತಿಗಳು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಾರ್ವಜನಿಕರು ಹಾಗೂ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾದವು.

ಪ್ರದರ್ಶನವನ್ನು ವೀಕ್ಷಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಸಮಾಜಕ್ಕೆ ಜಾಗೃತಿ ಮೂಡಿಸುವಲ್ಲಿ ಚಿತ್ರಕಲೆಯಂತಹ ಸೃಜನಾತ್ಮಕ ಮಾಧ್ಯಮಗಳು ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಕೈಗೊಂಡಿರುವ ಈ ವಿನೂತನ ಪ್ರಯತ್ನವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಎಸ್‌ಐಆರ್–2026ರ ಯಶಸ್ವಿ ಅನುಷ್ಠಾನಕ್ಕಾಗಿ ಸಾರ್ವಜನಿಕರು ಜೂನ್ 30ರಿಂದ ಜುಲೈ 29ರವರೆಗೆ ನಡೆಯುವ ಪರಿಷ್ಕರಣೆ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಅಧಿಕಾರಿಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಜಿಲ್ಲಾ ಪಂಚಾಯತ್ ಪಿಡಿ ಎಂ.ವಿ. ಚಳಗೇರಿ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಒಂದು ರಂಗೋಲಿ… ಪ್ರಜಾಪ್ರಭುತ್ವದ ಸಾವಿರ ಸಂದೇಶಗಳು

ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ ರಂಗೋಲಿ, ಎಸ್‌ಐಆರ್–2026 ಅಭಿಯಾನದ ಉದ್ದೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಿತು.

ರಂಗೋಲಿಯ ಮಧ್ಯಭಾಗದಲ್ಲಿದ್ದ “SIR – Special Intensive Revision” ಎಂಬ ಅಕ್ಷರಗಳು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನದ ಮಹತ್ವವನ್ನು ಸಾರಿದರೆ, ಅದರ ಸುತ್ತಲಿನ ವಿವಿಧ ಬಣ್ಣಗಳ ಮಾನವ ಆಕೃತಿಗಳು ಜಾತಿ, ಧರ್ಮ, ಭಾಷೆ, ಲಿಂಗ ಹಾಗೂ ವರ್ಗಭೇದಗಳನ್ನು ಮೀರಿ ಎಲ್ಲ ಮತದಾರರೂ ಸಮಾನರು ಎಂಬ ಸಂವಿಧಾನದ ಮೌಲ್ಯವನ್ನು ಪ್ರತಿಬಿಂಬಿಸಿದವು.

ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿ, ಮಸಿ ಗುರುತು ಇರುವ ಬೆರಳು ಹಾಗೂ ಮತಪೆಟ್ಟಿಗೆಯ ಚಿತ್ರಣಗಳ ಮೂಲಕ “ಮತದಾನವು ಹಕ್ಕಿನ ಜೊತೆಗೆ ಪವಿತ್ರ ಕರ್ತವ್ಯವೂ ಹೌದು” ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರಲಾಯಿತು.

ಹೂವಿನ ದಳಗಳ ವಿನ್ಯಾಸ ಏಕತೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತವಾಗಿದ್ದರೆ, ಹಸಿರು, ನೀಲಿ, ಕಿತ್ತಳೆ ಮತ್ತು ನೇರಳೆ ಬಣ್ಣಗಳ ಸಂಯೋಜನೆ “ವೈವಿಧ್ಯತೆಯಲ್ಲಿ ಏಕತೆ” ಎಂಬ ಭಾರತದ ಪ್ರಜಾಪ್ರಭುತ್ವದ ಶ್ರೇಷ್ಠ ಮೌಲ್ಯವನ್ನು ಅನಾವರಣಗೊಳಿಸಿತು.

“ಜೂನ್ 30 ರಿಂದ ಜುಲೈ 29, 2026” ಎಂಬ ಅಭಿಯಾನದ ಅವಧಿಯನ್ನು ರಂಗೋಲಿಯಲ್ಲಿ ಉಲ್ಲೇಖಿಸುವ ಮೂಲಕ, ಪ್ರತಿಯೊಬ್ಬ ಅರ್ಹ ಮತದಾರರು ಈ ಅವಧಿಯಲ್ಲಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img