ವಿಜಯಸಾಕ್ಷಿ ಸುದ್ದಿ, ಅಣ್ಣಿಗೇರಿ: ಸಕಲ ವೈಭೋಗಗಳನ್ನು ತ್ಯಜಿಸಿ, ತಮ್ಮ ಬದುಕನ್ನೇ ಉರಿಯುವ ದೀಪವನ್ನಾಗಿ ಮಾಡಿಕೊಂಡು ವಚನ ಸಾಹಿತ್ಯಕ್ಕೆ ಹೊಸ ಜೀವ ತುಂಬಿದ ಪುಣ್ಯಾತ್ಮ ಡಾ. ಫ.ಗು. ಹಳಕಟ್ಟಿ ಅವರು ಕನ್ನಡ ನಾಡಿನ ಹೆಮ್ಮೆಯ ಮಹನೀಯರು ಎಂದು ಪ್ರೊ. ಎಸ್.ಎಸ್. ಹರ್ಲಾಪೂರ ಹೇಳಿದರು.
ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ವಿದ್ಯಾಲಯದಲ್ಲಿ ಭಾನುವಾರ ನಡೆದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನೋತ್ಸವ ಹಾಗೂ ವಚನ ಸಂರಕ್ಷಣಾ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳಕಟ್ಟಿ ಅವರು ಇರದಿದ್ದರೆ ಬಸವಣ್ಣ ಸೇರಿದಂತೆ ಶರಣರ ವಚನಗಳು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಸಾಧ್ಯತೆ ಇತ್ತು. ತಮ್ಮ ಮನೆ-ಮಠವನ್ನೇ ಮಾರಾಟ ಮಾಡಿ ವಿಜಯಪುರದಲ್ಲಿ ಮುದ್ರಣಾಲಯ ಸ್ಥಾಪಿಸಿ ವಚನ ಸಾಹಿತ್ಯವನ್ನು ಪ್ರಕಟಿಸಿದ ಅವರ ತ್ಯಾಗ ಕನ್ನಡ ಸಾಹಿತ್ಯದ ಸುವರ್ಣ ಅಧ್ಯಾಯವಾಗಿದೆ. ಅವರ ಸೇವೆಗೆ ನಾವು ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕವೇ ನಿಜವಾದ ಗೌರವ ಸಲ್ಲಿಸಬಹುದು ಎಂದು ಹೇಳಿದರು.
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಅಂದಿನ ದಿನಗಳಲ್ಲಿ ಮಂಗಳೂರಿನ ಕ್ರಿಶ್ಚಿಯನ್ ಮಿಷನರಿ ಮುದ್ರಣಾಲಯವು ವಚನ ಸಾಹಿತ್ಯ ಪ್ರಕಟಿಸಲು ನಿರಾಕರಿಸಿದಾಗ, ಹಳಕಟ್ಟಿ ಅವರು ತಮ್ಮ ಆಸ್ತಿಯನ್ನೇ ಮಾರಾಟ ಮಾಡಿ ಸ್ವಂತ ಮುದ್ರಣಾಲಯ ಆರಂಭಿಸಿ ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಿದರು ಎಂದು ವಿವರಿಸಿದರು.
ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಮಾತನಾಡಿ, ಬಸವಣ್ಣ ಕನ್ನಡದ ನೆಲದಿಂದ ಜಗತ್ತಿಗೆ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಚಿಂತಕರಾಗಿದ್ದು, ಆ ವಿಚಾರಧಾರೆಯನ್ನು ಉಳಿಸಿ ಬೆಳೆಸಿದ ಮಹತ್ವದ ಕೆಲಸವನ್ನು ಡಾ. ಫ.ಗು. ಹಳಕಟ್ಟಿ ಮಾಡಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಕಿರಣ ಬೂದಿಹಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳಕಟ್ಟಿ ಅವರ ಮರಿ ಮೊಮ್ಮಗಳು 83 ವರ್ಷದ ಪ್ರಭಾವತಿ ರಬರಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಆಕರ್ಷಣೆಯಾಗಿ ನಿಂಗಮ್ಮ ಎಸ್. ಹೂಗಾರ ವಿದ್ಯಾಲಯದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶರಣ-ಶರಣೆಯರ ವೇಷಭೂಷಣದಲ್ಲಿ ವಚನಗಳನ್ನು ವಾಚಿಸಿದರು. ಡಾ. ಫ.ಗು. ಹಳಕಟ್ಟಿ ಅವರ ವೇಷದಲ್ಲಿ ವಿದ್ಯಾರ್ಥಿಯೊಬ್ಬರು ಅವರ ಜೀವನಗಾಥೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.
ಕಾರ್ಯಕ್ರಮದಲ್ಲಿ ವೇದವತಿ ಕಟ್ಟಿ, ಚಂದ್ರಶೇಖರ ಮುಂಡರಗಿ ಉಪಸ್ಥಿತರಿದ್ದರು. ಸುಮಿತ್ರಾ ಹುಣಸಿಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಕ್ಷಿ ಹರ್ಲಾಪೂರ ಪ್ರಾರ್ಥಿಸಿದರು. ಅಂಜಲಿ ಅಡಾಡಿ ಸ್ವಾಗತಿಸಿದರು. ಶಂಕ್ರಮ್ಮ ಕೋರಿ ವಂದಿಸಿದರು. ಲಕ್ಷ್ಮಿ ಬನ್ನೆಣ್ಣವರ ಕಾರ್ಯಕ್ರಮ ನಿರೂಪಿಸಿದರು.
“ತಮ್ಮ ಬದುಕನ್ನೇ ಉರಿಯುವ ದೀಪವನ್ನಾಗಿ ಮಾಡಿಕೊಂಡು ವಚನಗಳಿಗೆ ಬೆಳಕು ನೀಡಿದ ಮಹಾತ್ಮ ಡಾ. ಫ.ಗು. ಹಳಕಟ್ಟಿಯವರ ಸೇವೆ ಕನ್ನಡ ನಾಡು ಎಂದೆಂದಿಗೂ ಸ್ಮರಿಸಲಿದೆ.”
– ಪ್ರೊ. ಎಸ್.ಎಸ್. ಹರ್ಲಾಪೂರ



