ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಪ್ರತಿಯೊಂದು ಸಮಸ್ಯೆಗೆ ವಚನಸಾಹಿತ್ಯದಲ್ಲಿಯೇ ಪರಿಹಾರ ಅಡಗಿದ್ದು, ಬಸವಾದಿ ಶಿವಶರಣರ ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳು ವಿಶ್ವಶಾಂತಿಯ ದಾರಿದೀಪವಾಗಿವೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ನಗರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ ಆಯೋಜಿಸಿದ್ದ 2805ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಸವಾದಿ ಶಿವಶರಣರ ವಚನಗಳು ಜಾತಿ, ಮತ, ಪಂಥ, ಮೌಢ್ಯತೆ ಹಾಗೂ ಭೇದಭಾವಗಳನ್ನು ತೊಡೆದುಹಾಕಿ ಮಾನವಕುಲ ಒಂದೇ ಎಂಬ ಸಂದೇಶ ಸಾರುತ್ತವೆ. ಸಹಕಾರ, ಸಹಬಾಳ್ವೆ ಮತ್ತು ಶಾಂತಿಯ ಬದುಕಿಗೆ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕೆಸಿಸಿ ಬ್ಯಾಂಕ್ನ ನಿವೃತ್ತ ಅಧಿಕಾರಿಗಳಾದ ಎಸ್.ವಿ. ಪಾಟೀಲ (ಮುಂಡರಗಿ) ಅವರು, ಸಹಕಾರ ಚಳುವಳಿಯ ವಿಶ್ವಮಟ್ಟದ ಬೆಳವಣಿಗೆ, ಭಾರತದಲ್ಲಿ ಅದರ ವಿಸ್ತರಣೆ ಹಾಗೂ ಕರ್ನಾಟಕದ ಇಂದಿನ ಸಹಕಾರ ಕ್ಷೇತ್ರದ ಸ್ಥಿತಿಗತಿಗಳ ಕುರಿತು ವಿವರಿಸಿದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಸಂಗಮ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ, ಸಹಕಾರ ಎನ್ನುವುದು ಸಮಾಜಕ್ಕಷ್ಟೇ ಅಲ್ಲ, ಮಾನವ ದೇಹದ ಪ್ರತಿಯೊಂದು ಅಂಗದ ಕಾರ್ಯನಿರ್ವಹಣೆಯಲ್ಲೂ ಅಡಗಿದೆ. ಪರಸ್ಪರ ಸಹಕಾರವಿಲ್ಲದಿದ್ದರೆ ಯಾವುದೇ ವ್ಯವಸ್ಥೆ ಸುಗಮವಾಗಿ ಸಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಸ್ವಾತಿ ಕರಮುಡಿ, ವಿರೂಪಾಕ್ಷಪ್ಪ ನವಲಗುಂದ, ಪೂಜಾ ಗುಗ್ಗರಿ ಹಾಗೂ ರೋಹನ್ ಜೋಗಿನ ಅವರನ್ನು ಪ್ರತಿಭಾ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಚನ ಸಂಗೀತವನ್ನು ಸಾಯಿಪ್ರಸಾದ ಬಡಿಗೇರ ಹಾಗೂ ಗುರುನಾಥ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಖುಷಿ ಕಟ್ಟೆಕಾರ, ವಚನ ಚಿಂತನವನ್ನು ಕೋಮಲ ಮುಗಳಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಡಾ. ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಕುಟುಂಬ ಹಾಗೂ ಕೊಟ್ರೇಶ ದಾನಪ್ಪ ಮೆಣಸಿನಕಾಯಿ ಕುಟುಂಬ ವಹಿಸಿಕೊಂಡಿದ್ದರು.
ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
“ಬಸವಾದಿ ಶಿವಶರಣರ ವಚನಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸಿ, ಶಾಂತಿ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ.”
— ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು



