ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕಿನ ನಾಗಾವಿ ಹಾಗೂ ಕಳಸಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಗಳಲ್ಲಿ ಅಕ್ರಮವಾಗಿ ಗರಸು ಮತ್ತು ಮ್ಯಾಂಗನೀಸ್ (ಅದಿರು) ಗಣಿಗಾರಿಕೆ ನಡೆಯುತ್ತಿದ್ದು, ತಕ್ಷಣವೇ ದಂಧೆ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ತಹಸೀಲ್ದಾರ್ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಕರವೇ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ರಾತ್ರಿ-ಹಗಲು ಎನ್ನದೆ ಯಾವುದೇ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆ ನಡೆಯುತ್ತಿದೆ. ಇದರಿಂದ ಕೆಲ ಅಧಿಕಾರಿಗಳ ಪಾತ್ರದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಗುಡ್ಡ ಹಾಗೂ ಗೋಮಾಳ ಜಾಗಗಳಲ್ಲಿ ಭಾರಿ ಗಾತ್ರದ ಗುಂಡಿಗಳನ್ನು ತೋಡಿ ಗರಸು ಮತ್ತು ಮ್ಯಾಂಗನೀಸ್ ಸಾಗಿಸಲಾಗುತ್ತಿದೆ. ಈ ಗುಂಡಿಗಳಲ್ಲಿ ರೈತರು ಹಾಗೂ ಜಾನುವಾರುಗಳು ಬಿದ್ದು ಪ್ರಾಣ ಕಳೆದುಕೊಳ್ಳುವಂತಹ ಅಪಾಯ ಎದುರಾಗಿದೆ. ಆದ್ದರಿಂದ ಕೂಡಲೇ ಗುಂಡಿಗಳನ್ನು ಮುಚ್ಚಿ, ತಂತಿ ಬೇಲಿ ಅಳವಡಿಸಿ ಸಾರ್ವಜನಿಕರು ಹಾಗೂ ಜಾನುವಾರುಗಳ ಸುರಕ್ಷತೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗರಸು ಮತ್ತು ಮ್ಯಾಂಗನೀಸ್ ಸಾಗಣೆಯನ್ನು ತಕ್ಷಣವೇ ತಡೆದು ಕಾನೂನು ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಗದಗ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾರುತಿ ಈಳಗೇರ, ಹನುಮಂತ ಪೂಜಾರ, ತೌಶೀಫ್ ಡಾಲಾಯತ್, ಬಸವರಾಜ ಮೇಟಿ, ಲಕ್ಷ್ಮೀ ಹಿತ್ತಲಮನಿ, ಹುಸೇನಸಾಬ ಕುಂಡಾಲಿ, ದಾವಲಸಾಬ ತಹಶೀಲ್ದಾರ, ರವಿ ಮಲ್ಲಾಡದ, ಮುಸ್ತಾಫ ದಾವಣಗೇರಿ, ಹುಸೇನ ಅಕ್ಕಿ, ರೂಪಾ ಅಬ್ಬಿಗೇರಿ, ಖಾಸಿಂಸಾಬ್ ವಾಲಿಕಾರ, ಇಸಾರಅಹಮ್ಮದ್ ನದಾಫ್, ಸಿರಾಜ್ ಹೊಸಮನಿ, ಕುಮಾರ ರೆವಣ್ಣನವರ, ಪ್ರಕಾಶ ನಂದಿಕೋಡೆ, ಯೂಸೂಫ್ ಗದಗ, ಪ್ರಶಾಂತ್ ನವಲಗುಂದ ಹಾಗೂ ಶಂಭು ಹಿರೇಮಠ ಉಪಸ್ಥಿತರಿದ್ದರು.



