ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕರ್ನಾಟಕ ಸರ್ಕಾರದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ‘ರಾಜ್ಯದ ದತ್ತಾಂಶಕ್ಕಾಗಿ ಸೈಬರ್ ಭದ್ರತಾ ಚೌಕಟ್ಟನ್ನು ಬಲಪಡಿಸುವುದು’ ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಬೆಂಗಳೂರಿನಲ್ಲಿ ನಡೆಯಿತು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ), ಇ-ಆಡಳಿತ ಕೇಂದ್ರ (CeG), ಕರ್ನಾಟಕ ಸೈಬರ್ ಭದ್ರತಾ ಉತ್ಕೃಷ್ಟತಾ ಕೇಂದ್ರ (CySecK) ಹಾಗೂ ರಾಷ್ಟ್ರೀಯ ಇ-ಆಡಳಿತ ವಿಭಾಗದ ಸಹಯೋಗದಲ್ಲಿ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ 30ಕ್ಕೂ ಹೆಚ್ಚು ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ಸರ್ಕಾರಿ ಸಂಸ್ಥೆಗಳ 80ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಾಗಾರವನ್ನು ಡಿಪಿಎಆರ್ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ (IAS), ಕರ್ನಾಟಕ ಇನ್ನೋವೇಶನ್ ಆಂಡ್ ಟೆಕ್ನಾಲಜಿ ಸೊಸೈಟಿ (KITS) ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ (IAS) ಸೇರಿದಂತೆ ಹಿರಿಯ ಅಧಿಕಾರಿಗಳು ಉದ್ಘಾಟಿಸಿದರು.
ಕಾರ್ಯಾಗಾರದಲ್ಲಿ ‘ಭವಿಷ್ಯಕ್ಕಾಗಿ ಸೈಬರ್ ಸನ್ನದ್ಧ ಕರ್ನಾಟಕ’ ಹಾಗೂ ‘ಇ-ಆಡಳಿತಕ್ಕಾಗಿ ಸೈಬರ್ ಸ್ಥಿತಿಸ್ಥಾಪಕತ್ವ’ ವಿಷಯಗಳ ಕುರಿತು ತಜ್ಞರು ಉಪನ್ಯಾಸ ನೀಡಿದರು. ನಾಗರಿಕರ ದತ್ತಾಂಶ ರಕ್ಷಣೆ, ಸರ್ಕಾರದ ಡಿಜಿಟಲ್ ಮೂಲಸೌಕರ್ಯ ಭದ್ರತೆ ಹಾಗೂ ಸೈಬರ್ ಸ್ಥಿತಿಸ್ಥಾಪಕತ್ವ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.
ರಾಜ್ಯ ದತ್ತಾಂಶ ಕೇಂದ್ರದ ಸೈಬರ್ ಭದ್ರತೆ, ಕೆಎಸ್ವಾನ್ (KSWAN) ಭದ್ರತೆ, ಸೆಕ್ಯುರಿಟಿ ಆಪರೇಷನ್ಸ್ ಸೆಂಟರ್ (SOC), ರಾಜ್ಯ CSIRT, Zero Trust ತತ್ವ, ದತ್ತಾಂಶ ವರ್ಗೀಕರಣ, ಡಿಪಿಡಿಪಿ (DPDP) ಸನ್ನದ್ಧತೆ ಹಾಗೂ ಸೈಬರ್ ಭದ್ರತಾ ಸಾಮರ್ಥ್ಯ ವೃದ್ಧಿ ಸೇರಿದಂತೆ ಆರು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.
ಕಾರ್ಯಾಗಾರದ ಅಂತ್ಯದಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಸೈಬರ್ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ‘ಜಂಟಿ ಕ್ರಿಯಾ ಯೋಜನೆ’ (Joint Action Plan) ಸಿದ್ಧಪಡಿಸಲಾಯಿತು. ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಭವಿಷ್ಯಕ್ಕೆ ಸನ್ನದ್ಧವಾದ ಡಿಜಿಟಲ್ ಆಡಳಿತ ವ್ಯವಸ್ಥೆ ನಿರ್ಮಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.



