ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ (ಮುಂಡರಗಿ–ಹೂವಿನಹಡಗಲಿ ಮಾರ್ಗವಾಗಿ) ನೂತನ ರೈಲು ಮಾರ್ಗ ಯೋಜನೆಯ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿಯ ನಿಯೋಗವು ಕೇಂದ್ರ ಶಿಕ್ಷಣ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಬಸವರಾಜ ಎಸ್. ದೇಸಾಯಿ ನೇತೃತ್ವದ ನಿಯೋಗವು ಆಗಸ್ಟ್ 1ರಂದು ನವದೆಹಲಿಯಲ್ಲಿರುವ ಸಚಿವರ ನಿವಾಸದಲ್ಲಿ ಭೇಟಿ ನೀಡಿ, ಸುಮಾರು 94 ಕಿ.ಮೀ. ಉದ್ದದ ಈ ರೈಲು ಮಾರ್ಗಕ್ಕೆ ಈಗಾಗಲೇ ಪ್ರಾಥಮಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಅನುದಾನವೂ ಮಂಜೂರಾಗಿದೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿತು.
ಕಳೆದ 18 ವರ್ಷಗಳಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಈ ಯೋಜನೆಯಿಂದ ಗದಗ, ಮುಂಡರಗಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ ಭಾಗಗಳ ಸಂಪರ್ಕ ಸುಧಾರಣೆಯಾಗುವುದರ ಜೊತೆಗೆ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಉದ್ಯೋಗ ಹಾಗೂ ಉತ್ತರ–ಮಧ್ಯ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ ಎಂದು ನಿಯೋಗ ವಿವರಿಸಿತು.
ಮನವಿ ಸ್ವೀಕರಿಸಿದ ಸಚಿವ ಪ್ರಲ್ಹಾದ್ ಜೋಶಿ, ಯೋಜನೆಯ ಮಹತ್ವವನ್ನು ಒಪ್ಪಿಕೊಂಡು, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ಶೀಘ್ರ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಿಯೋಗದಲ್ಲಿ ಮುತ್ತಪ್ಪ ಪಾವಡಶೆಟ್ಟರ್, ನಿತಿನ್ ವಿ. ದೊಡ್ಡಣ್ಣವರ ಹಾಗೂ ಸಚಿನ್ ಬಿ. ದೇಸಾಯಿ ಉಪಸ್ಥಿತರಿದ್ದರು.
“ಗದಗ–ಹರಪನಹಳ್ಳಿ ರೈಲು ಮಾರ್ಗ ಈ ಭಾಗದ ಜನರ 18 ವರ್ಷದ ಕನಸು. ಕಾಮಗಾರಿ ಆರಂಭವಾಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.”
ಬಸವರಾಜ ಎಸ್. ದೇಸಾಯಿ, ಅಧ್ಯಕ್ಷರು, ಮುಂಡರಗಿ ತಾಲೂಕು ರೈಲ್ವೆ ಹೋರಾಟ ಸಮಿತಿ



