ಬೆಂಗಳೂರು: ಪಾಲುದಾರಿಕೆ ಸಂಸ್ಥೆ ಎಂಬುದು ಕೇವಲ ಒಪ್ಪಂದದ ಆಧಾರದ ಮೇಲೆ ರೂಪುಗೊಳ್ಳುವ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಬ್ಬರು ಪಾಲುದಾರರನ್ನು ಮಾತ್ರ ಹೊಂದಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ, ಆ ಪಾಲುದಾರಿಕೆ ಸಂಸ್ಥೆ ಸ್ವಯಂಚಾಲಿತವಾಗಿ ವಿಸರ್ಜನೆಗೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪಾಲುದಾರಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ವಾರಸುದಾರರನ್ನು ಪ್ರತಿವಾದಿಗಳಾಗಿ ಸೇರಿಸಲು ಅನುಮತಿ ನೀಡಿದ್ದ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ನ್ಯಾಯಪೀಠದ ಪ್ರಕಾರ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೂ ಸಂಸ್ಥೆ ರದ್ದಾಗುವುದಿಲ್ಲ ಹಾಗೂ ಮೃತರ ವಾರಸುದಾರರು ಪಾಲುದಾರರಾಗುತ್ತಾರೆ ಎಂಬ ಷರತ್ತು ಪಾಲುದಾರಿಕೆ ಒಪ್ಪಂದದಲ್ಲಿದ್ದರೂ ಅದು ಭಾರತೀಯ ಪಾಲುದಾರಿಕೆ ಕಾಯ್ದೆ, 1932ರ ಮೂಲ ತತ್ವಗಳಿಗೆ ವಿರುದ್ಧವಾಗಿದೆ.
ಪಾಲುದಾರಿಕೆ ಎಂಬುದು ಕೇವಲ ಒಡಂಬಡಿಕೆಯ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವುದಿಲ್ಲ. ಹೀಗಾಗಿ, ಹೊಸ ಒಪ್ಪಂದ ಅಥವಾ ಉಳಿದ ಪಾಲುದಾರರ ಅನುಮತಿಯಿಲ್ಲದೆ ಮೃತ ಪಾಲುದಾರರ ಕಾನೂನುಬದ್ಧ ವಾರಸುದಾರರು ಸ್ವಯಂಚಾಲಿತವಾಗಿ ಪಾಲುದಾರರಾಗಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ನೀಡಿರುವ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರ ಮರಣದಿಂದಲೇ ಪಾಲುದಾರಿಕೆ ಸಂಸ್ಥೆ ಕಾನೂನಾತ್ಮಕವಾಗಿ ಅಂತ್ಯಗೊಳ್ಳುತ್ತದೆ ಎಂದು ತಿಳಿಸಿದೆ. ಈ ಕಾನೂನು ತತ್ವವನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯ ದಾವೆದಾರರ ಮನವಿಯನ್ನು ಅಂಗೀಕರಿಸಿರುವುದು ಸರಿಯಲ್ಲ ಎಂದು ಹೇಳಿ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
ಪ್ರಕರಣದ ಹಿನ್ನೆಲೆ
ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಮೆಸೆಸ್ ಶಿವ ಸ್ಟೀಲ್ ಸಪ್ಲೈಸ್ ಸಂಸ್ಥೆ, ಬಾಕಿ ಹಣ ವಸೂಲಾತಿಗಾಗಿ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ವಿರುದ್ಧ ವಾಣಿಜ್ಯ ದಾವೆ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಯುವ ವೇಳೆ ಪ್ರತಿವಾದಿ ಸಂಸ್ಥೆಯ ಪಾಲುದಾರರಾದ ಶಾಂತರಾಜ್ ಮೃತಪಟ್ಟಿದ್ದರು.
ಇದಾದ ಬಳಿಕ ಮೃತ ಪಾಲುದಾರರ ಸ್ಥಾನಕ್ಕೆ ಅವರ ಕಾನೂನುಬದ್ಧ ವಾರಸುದಾರರನ್ನು ಅಥವಾ ಹೊಸ ಪಾಲುದಾರರನ್ನು ಸೇರಿಸಿಕೊಳ್ಳಲು ಅನುಮತಿ ಕೋರಿ ದಾವೆದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ದಾವಣಗೆರೆ ನ್ಯಾಯಾಲಯ ಅನುಮೋದಿಸಿತ್ತು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ಸಂಸ್ಥೆಯ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ್, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ ಪಾಲುದಾರಿಕೆ ಸಂಸ್ಥೆಯೇ ಅಂತ್ಯಗೊಳ್ಳುತ್ತದೆ ಎಂಬ ಮಹತ್ವದ ಕಾನೂನು ತತ್ವವನ್ನು ಪುನರುಚ್ಚರಿಸಿದೆ.



