ರಾಯಚೂರು: ಭಾರತದಲ್ಲಿ ಗಲಭೆ ಸೃಷ್ಟಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಯಚೂರಿನಲ್ಲಿ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಾಹಿಲ್ ಬಂಧಿತ ಆರೋಪಿ. ಈತ ಟೀ ಸ್ಟಾಲ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರು ನಗರದ ಸದರ್ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ವಿದೇಶಿ ವ್ಯಕ್ತಿಯೊಂದಿಗೆ ಶಾಹಿಲ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಶಾಹಿಲ್ ಇನ್ಸ್ಟಾಗ್ರಾಂನಲ್ಲಿ ‘ರಾಣಾ ಭಾಯ್’ ಎಂಬ ಹೆಸರಿನ ಖಾತೆಯೊಂದಿಗೆ ಸಂಪರ್ಕ ಹೊಂದಿದ್ದ. ಆ ಖಾತೆಯಲ್ಲಿನ ಕೆಲವು ಪೋಸ್ಟ್ಗಳನ್ನು ಲೈಕ್, ಕಮೆಂಟ್ ಹಾಗೂ ಶೇರ್ ಮಾಡುವ ಮೂಲಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.
ಅನಾಮಧೇಯ ವ್ಯಕ್ತಿಯ ಪೋಸ್ಟ್ಗಳಿಂದ ಪ್ರಭಾವಿತನಾಗಿದ್ದ ಶಾಹಿಲ್, ಪಿಸ್ತೂಲ್ಗಾಗಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದ ಎನ್ನಲಾಗಿದೆ. ಬಳಿಕ ವಿದೇಶಿ ವ್ಯಕ್ತಿ ಶಾಹಿಲ್ನ ವಾಟ್ಸ್ಆ್ಯಪ್ ಸಂಖ್ಯೆಯನ್ನು ಪಡೆದುಕೊಂಡಿದ್ದು, ಜುಲೈ 14ರಿಂದ ಇಬ್ಬರ ನಡುವೆ ಹಲವು ವಿಚಾರಗಳ ಕುರಿತು ಸಂಭಾಷಣೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಭಾಷಣೆ ವೇಳೆ ಭಾರತದಲ್ಲಿ ಗಲಭೆ ಸೃಷ್ಟಿಸಲು ಪ್ರಚೋದನೆ ನೀಡಲಾಗಿತ್ತು ಹಾಗೂ ಅದಕ್ಕಾಗಿ ಹಣ ಮತ್ತು ಪಿಸ್ತೂಲ್ ಒದಗಿಸುವುದಾಗಿ ಭರವಸೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಸಂಚು ರೂಪಿಸಿದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ಸದರ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಶಾಹಿಲ್ ವಿದೇಶಿ ವ್ಯಕ್ತಿಯ ಹೊರತಾಗಿ ಬೇರೆ ಯಾರೊಂದಿಗಾದರೂ ಸಂಪರ್ಕ ಹೊಂದಿದ್ದನಾ, ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಹಾಗೂ ಹಣ ಅಥವಾ ಶಸ್ತ್ರಾಸ್ತ್ರದ ವ್ಯವಹಾರ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.



