ಬೆಂಗಳೂರು: ನಕಲಿ ಔಷಧಿ ಜಾಲ ಸಂಬಂಧ ಶೀಘ್ರದಲ್ಲಿಯೇ ಎಸ್ಐಟಿ (Special Investigation Team) ರಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ನಕಲಿ ಔಷಧಿ ಜಾಲ ಪತ್ತೆ ಬಹಳ ಗಂಭೀರ ವಿಷಯ, ಅಂತಾರಾಜ್ಯ ಮಟ್ಟದಲ್ಲಿ ಜಾಲ ಇದ್ದು,
ರಾಜ್ಯದಲ್ಲಿ ಬೇರೆ ಎಲ್ಲೆಲ್ಲಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಅದೇ ರೀತಿ ಸಂಬಂಧಪಟ್ಟ ರಾಜ್ಯಗಳ ಸಚಿವರಿಗೂ ಪತ್ರ ಬರೆದಿದ್ದು, ಆ ಫ್ಯಾಕ್ಟರಿ ಮೇಲೆ ಅವರೇ ಕ್ರಮ ಜರುಗಿಸಬೇಕು, ಎಸ್ಐಟಿ ಮುಖಾಂತರ ತನಿಖೆ ನಡೆಸಬೇಕು ಎಂದು ಕೋರಿರುವುದಾಗಿ ಹೇಳಿದರು. ಈಗಾಗಲೇ ರಾಮನಗರ ಎಸ್ಪಿ ಮತ್ತು ಪೊಲೀಸರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದಿನ ಆರೋಗ್ಯ ಸಚಿವರಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆಗೆ, ಹಿಂದಿನ ಎಲ್ಲಾ ಸಚಿವರು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಅದನ್ನು ತಾವು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಸಚಿವರು ಸ್ಪಷ್ಟಪಡಿಸಿದರು. ಇದು ಕೇವಲ ಆರೋಗ್ಯ ಇಲಾಖೆ ಅಥವಾ ಆಹಾರ ಇಲಾಖೆಯಿಂದ ಸಾಧ್ಯವಿಲ್ಲ,
ರಾಜ್ಯದಲ್ಲಿ 6.5 ಕೋಟಿ ಜನಸಂಖ್ಯೆ ಇರುವುದಾಗಿ ತಿಳಿಸಿದ ಅವರು, ಇಲಾಖೆಯಲ್ಲಿರುವ 150 ಜನರಿಂದ ಇದನ್ನು ನೋಡಲು ಕಷ್ಟವಾಗುತ್ತದೆ, ಸಮಾಜದಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಒಂದೇ ಔಷಧಿ ಎರಡು ಅಂಗಡಿಗಳಲ್ಲಿ ಬೇರೆ ಬೇರೆ ದರದಲ್ಲಿ ಮಾರಾಟವಾಗುತ್ತಿದ್ದರೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಿದರು.
ಎಷ್ಟು ವರ್ಷಗಳಿಂದ ಈ ನಕಲಿ ಔಷಧಿಗಳು ಮಾರುಕಟ್ಟೆಯಲ್ಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಎಲ್ಲಾ ವಿಚಾರಗಳು ತನಿಖೆ ಆದ ಬಳಿಕ ಹೊರಬರುತ್ತವೆ ಎಂದು ತಿಳಿಸಿ, ಯಾವ್ಯಾವ ಆಸ್ಪತ್ರೆಗಳಿಗೆ ಇದು ತಲುಪಿದೆ, ಯಾವ ರೋಗಿಗಳಿಗೆ ನೀಡಲಾಗಿದೆ ಎಂಬುದೂ ತನಿಖೆಯ ನಂತರ ಗೊತ್ತಾಗುತ್ತದೆ ಎಂದರು.
ಸಾವಿಗೆ ಪ್ರೇರಣೆಯಾಗುವ ಸಂಬಂಧ ಸೆಕ್ಷನ್ 302 ಅನ್ವಯಿಸುವಂತೆಯೂ ಸೂಚಿಸಿರುವುದಾಗಿ ತಿಳಿಸಿದ ಸಚಿವರು, ಈಗಾಗಲೇ 6 ಕಂಪನಿಗಳನ್ನು ಲೇಬಲ್ ಮಾಡಲಾಗಿದ್ದು, ತಂದು ಮಾರಾಟ ಮಾಡುತ್ತಿದ್ದವರ ಮೇಲೆ ಕೇಸ್ ದಾಖಲಾಗಿದೆ ಎಂದರು. ಇದರಲ್ಲಿ ಭಾಗಿಯಾದ ಎಲ್ಲರ ಮೇಲೂ ಕೇಸ್ ದಾಖಲಾಗಲಿದೆ ಎಂದು ಸ್ಪಷ್ಟಪಡಿಸಿದರು.



