HomeGadag Newsಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ: ಬೂದೀಶ್ವರ ಮಹಾಸ್ವಾಮಿಗಳು

ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಧರ್ಮ: ಬೂದೀಶ್ವರ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿಯ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ ಮೊದಲ ದಿನದ ಸಭಾ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸಳ್ಳಿ ಬೂದೀಶ್ವರ ಮಠದ ಪೂಜ್ಯ ಅಭಿನವ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು-ಸಾವು ಪ್ರಕೃತಿಯ ನಿಯಮವಾಗಿದ್ದು, ಇವೆರಡರ ನಡುವಿನ ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ಮನುಷ್ಯನ ಕರ್ತವ್ಯ ಎಂದರು.

ಮನುಷ್ಯನಿಗೆ 84 ಲಕ್ಷ ಜೀವ ರಾಶಿಗಳಿಗಿಂತ ಭಿನ್ನವಾದ ಅರಿವಿನ ಶಕ್ತಿ ದೊರೆತಿದೆ. ಈ ಅರಿವನ್ನು ಸದುಪಯೋಗಪಡಿಸಿಕೊಂಡು ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು. ದೇವರು ನಾವು ಮಾಡುವ ಪೂಜೆಯನ್ನು ಮಾತ್ರ ನೋಡುವುದಿಲ್ಲ; ನಾವು ಮಾಡುವ ಉತ್ತಮ ಕಾರ್ಯಗಳನ್ನು ಖಂಡಿತ ನೋಡುತ್ತಾನೆ. ದುಷ್ಟ ಆಲೋಚನೆಗಳನ್ನು ದೂರ ಮಾಡಿ ಪ್ರವಚನ ಆಲಿಸುವ ಮೂಲಕ ಹರಿಜಾತ್ರೆಯನ್ನು ಸಾರ್ಥಕಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ಸಿದ್ಧವೀರ ಮಹಾಸ್ವಾಮಿಗಳು ಗುರುಸಿದ್ದಯ್ಯ ಹಿರೇಮಠ ಮಾತನಾಡಿ, ದ್ಯಾಮವ್ವ–ದುರ್ಗಮ್ಮ ದೇವಿಯರ ಹರಿಜಾತ್ರೆ ಹರಕೆ ತೀರಿಸುವ ಪವಿತ್ರ ದಿನವಾಗಿದೆ ಎಂದರು. ರಕ್ತಬೀಜಾಸುರನ ಸಂಹಾರ ಮಾಡಿ ಶ್ರೀದೇವಿ ಜಗಜ್ಜನನಿಯಾಗಿ ಹೊರಹೊಮ್ಮಿದ ಪರಂಪರೆಯನ್ನು ವಿವರಿಸಿದರು.

ಮನುಷ್ಯನ ಬದುಕಿನಲ್ಲಿ ವಿವಿಧ ರೀತಿಯ ಸುಖಗಳನ್ನು ಕಾಣಬಹುದು. ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ನೀಡುವ ಬಾಳೆಹಣ್ಣಿನ ಪ್ರಸಾದದ ಸಿಪ್ಪೆ ತೆಗೆದು ಸೇವಿಸುವ ಮೂಲಕ ಒಳಗಿನ ಸುಖವನ್ನು, ಜಾತ್ರೆಯಲ್ಲಿ ಉತ್ತತ್ತಿ ಎಸೆದು ಮರಳಿ ಪಡೆದು ಸೇವಿಸುವ ಮೂಲಕ ಹೊರಗಿನ ಸುಖವನ್ನು ಹಾಗೂ ಮಠಾಧೀಶರಿಂದ ಆಶೀರ್ವಾದ ಪಡೆದು ನೀಡುವ ಕಲ್ಲುಸಕ್ಕರೆಯನ್ನು ಸೇವಿಸುವ ಮೂಲಕ ಪೂರ್ಣ ಸುಖವನ್ನು ಅನುಭವಿಸಬಹುದು ಎಂದು ಅವರು ವಿಶ್ಲೇಷಿಸಿದರು.

ಕಾರ್ಯಕ್ರಮದಲ್ಲಿ ಗದಗದ ಆಧ್ಯಾತ್ಮಿಕ ವಿದ್ಯಾಶ್ರಮದ ಪೂಜ್ಯ ಶಿವಶರಣೆ ನೀಲಮ್ಮತಾಯಿ ಅಸುಂಡಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ಜಾತ್ರಾ ಕಮಿಟಿ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನವರ, ಕಿತ್ತೂರು ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಅಬ್ಬಿಗೇರಿ, ಎಸ್‌ಎಸ್‌ಕೆ ಸಮಾಜದ ಮುಖಂಡ ಕಿಶನ ಮೆಹರವಾಡೆ, ನಗರಸಭೆ ಸದಸ್ಯೆ ಲಕ್ಷ್ಮಿ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷ್ಮಿ ಕಾಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೀತಾಂಜಲಿ ಗೌಡರ ಪ್ರಾರ್ಥಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಪಂಚಾಕ್ಷರಿ ಅಂಗಡಿ ವಂದಿಸಿದರು.

ನಂತರ ಮಂಡ್ಯ ಹಾಗೂ ಮೈಸೂರಿನ ಸವಿತಾ ಪೂಜಾ ಕುಣಿತ ತಂಡದಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

“ಹಸಿದವರಿಗೆ ಅನ್ನ, ಬಾಯಾರಿದವರಿಗೆ ನೀರು, ಮಾನ ಮುಚ್ಚಿಕೊಳ್ಳಲು ಬಟ್ಟೆ ನೀಡಿ, ಕಷ್ಟದಲ್ಲಿರುವವರಿಗೆ ನೆರವಾದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ. ನನ್ನನ್ನು ಪ್ರೀತಿಸಿದಂತೆ ಮತ್ತೊಬ್ಬರನ್ನು ಪ್ರೀತಿಸಬೇಕು. ಕಷ್ಟದ ಸಂದರ್ಭದಲ್ಲಿ ನಾವು ಮಾಡಿದ ಧರ್ಮ ಮಾತ್ರ ನಮ್ಮನ್ನು ಕಾಯುತ್ತದೆ. ಆದ್ದರಿಂದ ಧರ್ಮವಂತರಾಗಿ ಬಾಳಬೇಕು.”

— ಅಭಿನವ ಜಗದ್ಗುರು ಬೂದೀಶ್ವರ ಮಹಾಸ್ವಾಮಿಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img