ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ನಡೆದ ಭೇಟಿಯ ಬಳಿಕ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಶುಭಕೋರಿರುವ ಅವರು, ‘ಕೆಜಿಎಫ್’ ಮೂಲಕ ರಾಕಿ ಭಾಯ್ ಪಾತ್ರವನ್ನು ಯಶ್ ಕಟ್ಟಿಕೊಟ್ಟ ರೀತಿಯಿಂದ ಹಿಡಿದು ಅವರ ವೈಯಕ್ತಿಕ ವ್ಯಕ್ತಿತ್ವದವರೆಗೆ ಹಲವು ವಿಚಾರಗಳನ್ನು ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಅವರನ್ನು ಭೇಟಿಯಾಗಿರುವುದು ಸಂತೋಷ ತಂದಿದೆ ಎಂದು ಹೇಳಿರುವ ಅನುಪಮ್ ಖೇರ್, ‘ಕೆಜಿಎಫ್’ ಸರಣಿಯ ಮೂಲಕ ರಾಕಿ ಭಾಯ್ ಪಾತ್ರಕ್ಕೆ ಅವರು ನೀಡಿದ ಜೀವಂತಿಕೆ ಹಾಗೂ ಅವರ ಸಂಪೂರ್ಣ ಸಿನಿ ಪಯಣವನ್ನು ಮೆಚ್ಚಿಕೊಂಡಿದ್ದಾರೆ.
ವಯಸ್ಸು ಮತ್ತು ತಲೆಮಾರು ವಿಭಿನ್ನವಾಗಿದ್ದರೂ ಕನಸುಗಳ ಭಾಷೆ ಒಂದೇ ಎಂಬ ಸಂದೇಶವನ್ನು ಅನುಪಮ್ ಖೇರ್ ನೀಡಿದ್ದಾರೆ. ಯಶ್ ಅವರ ವೃತ್ತಿಜೀವನದ ಬೆಳವಣಿಗೆಯ ಹಿಂದೆ ಇರುವ ಉತ್ಸಾಹ ಮತ್ತು ಪರಿಶ್ರಮವನ್ನು ಅವರು ವಿಶೇಷವಾಗಿ ಗುರುತಿಸಿದ್ದಾರೆ.
ಯಶ್ ತೆರೆಮೇಲೆ ಪವರ್ಫುಲ್ ಆಗಿ ಕಾಣಿಸಿಕೊಂಡರೂ ನಿಜ ಜೀವನದಲ್ಲಿ ಅತ್ಯಂತ ಸರಳ ಹಾಗೂ ವಿನಮ್ರ ವ್ಯಕ್ತಿ ಎಂದು ಅನುಪಮ್ ಖೇರ್ ಹೇಳಿದ್ದಾರೆ. ಯಶ್ ಅವರಂತಹ ಪ್ರತಿಭಾವಂತ ಕಲಾವಿದರ ಉತ್ಸಾಹ ಮತ್ತು ಕೆಲಸದ ಮೇಲಿನ ಬದ್ಧತೆ ತಮಗೂ ಹೊಸ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಸಿನಿಮಾ ಮಾತ್ರವಲ್ಲದೆ ಇಬ್ಬರೂ ತಮ್ಮ ವೈಯಕ್ತಿಕ ಬದುಕು, ಹೆತ್ತವರು, ಕುಟುಂಬ ಹಾಗೂ ಮುಂದಿನ ಕನಸುಗಳ ಬಗ್ಗೆಯೂ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಈ ಮಾತುಕತೆಯ ಬಳಿಕ ‘ಟಾಕ್ಸಿಕ್’ ಸಿನಿಮಾ ಯಶಸ್ವಿಯಾಗಲಿ, ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿ ಹಾಗೂ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಲಿ ಎಂದು ಅನುಪಮ್ ಖೇರ್ ಶುಭ ಹಾರೈಸಿದ್ದಾರೆ.



