HomeGadag Newsಗದಗವರೆಗೆ ಹೊಸಪೇಟೆ-ಅರಸೀಕೆರೆ ರೈಲು ವಿಸ್ತರಣೆಗೆ ಮನವಿ

ಗದಗವರೆಗೆ ಹೊಸಪೇಟೆ-ಅರಸೀಕೆರೆ ರೈಲು ವಿಸ್ತರಣೆಗೆ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಆ. 28ರಿಂದ ಆರಂಭವಾಗಲಿರುವ ಹೊಸಪೇಟೆ-ಅರಸೀಕೆರೆ ಡೆಮು ರೈಲನ್ನು ಗದಗ ಜಂಕ್ಷನ್‌ವರೆಗೆ ವಿಸ್ತರಿಸುವಂತೆ ಹಾಗೂ ಬಳ್ಳಾರಿ-ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ಡೆಮು ರೈಲು ಆರಂಭಿಸಿ ದಿನಕ್ಕೆ ಎರಡು ಟ್ರಿಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಹೊಸಪೇಟೆ-ಅರಸೀಕೆರೆ ನಡುವೆ ವಾರದಲ್ಲಿ ಐದು ದಿನ ಸಂಚರಿಸಲಿರುವ 07343 ಹಾಗೂ 07344 ಸಂಖ್ಯೆಯ ರೈಲನ್ನು ಗದಗವರೆಗೆ ವಿಸ್ತರಿಸಿದರೆ ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ವ್ಯಾಪಾರಸ್ಥರು, ಪ್ರವಾಸಿಗರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಅರಸೀಕೆರೆಯಿಂದ ರಾತ್ರಿ 9.30ಕ್ಕೆ ಹೊರಡುವ ರೈಲನ್ನು ಗದಗವರೆಗೆ ವಿಸ್ತರಿಸಿದರೆ ರಾತ್ರಿ 11ರ ವೇಳೆಗೆ ಗದಗ ತಲುಪಬಹುದು. ಬಳಿಕ ಮುಂಜಾನೆ 4 ಗಂಟೆಗೆ ಗದಗದಿಂದ ರೈಲು ಹೊರಡುವಂತೆ ವೇಳಾಪಟ್ಟಿ ರೂಪಿಸಿದರೆ ಹೊಸಪೇಟೆ, ಕೊಪ್ಪಳ ಹಾಗೂ ಗದಗ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ರೈಲಿನ ಮೂಲಕ ಹುಬ್ಬಳ್ಳಿ, ವಿಜಯಪುರ ಸೇರಿದಂತೆ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಹೊಸಪೇಟೆ ಮಾರ್ಗದಲ್ಲಿ ಸಂಜೆ 6.40ರ ನಂತರ ಕೊಪ್ಪಳ-ಗದಗ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕ ಇಲ್ಲದಿರುವ ಹಿನ್ನೆಲೆಯಲ್ಲಿ ಈ ರೈಲು ವಿಸ್ತರಣೆ ಅಗತ್ಯವಾಗಿದೆ. ಗದಗ ಜಂಕ್ಷನ್‌ ಮೂಲಕ ಹುಬ್ಬಳ್ಳಿ, ವಿಜಯಪುರ ಹಾಗೂ ಮಹಾರಾಷ್ಟ್ರ ಭಾಗಗಳಿಗೆ ಪ್ರಯಾಣಿಸುವವರಿಗೂ ರೈಲು ಸಂಪರ್ಕ ಮತ್ತಷ್ಟು ಸುಲಭವಾಗಲಿದೆ ಎಂದು ವಿಶ್ವನಾಥ ಖಾನಾಪೂರ ತಿಳಿಸಿದ್ದಾರೆ.

ಇದರ ಜೊತೆಗೆ ಬಳ್ಳಾರಿ-ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ-ಬಳ್ಳಾರಿ ಮಾರ್ಗದಲ್ಲಿ ಹೊಸ ಡೆಮು ರೈಲು ಆರಂಭಿಸಿ, ಮುಂಜಾನೆ ಮತ್ತು ರಾತ್ರಿ ತಲಾ ಒಂದು ಟ್ರಿಪ್‌ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಈ ಭಾಗದ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುವುದರೊಂದಿಗೆ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಚಟುವಟಿಕೆಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ರೈಲ್ವೆ ಸಚಿವರು, ರೈಲ್ವೆ ಇಲಾಖೆ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ ಹಿಟ್ನಾಳ ಮತ್ತು ಗದಗ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ಅವರು ಈ ಬೇಡಿಕೆಗೆ ಸ್ಪಂದಿಸಿ ಎರಡೂ ಜಿಲ್ಲೆಗಳ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ವಿಶ್ವನಾಥ ಖಾನಾಪೂರ ಒತ್ತಾಯಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img