ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಾತನ ಹಾಗೂ ಐತಿಹಾಸಿಕ ಹಿನ್ನೆಲೆಯ ಮೂಕ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ನೂತನ ಗಣೇಶ ಹಾಗೂ ಆಂಜನೇಯ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.
ಬೆಳಿಗ್ಗೆ ಗಂಜಿಗಟ್ಟಿ ಶ್ರೀ ಡಾ. ವೈಜನಾಥ ಶಿವಲಿಂಗೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಳಸಾರೋಹಣ ಹಾಗೂ ನೂತನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ವಿಧಿವಿಧಾನಗಳು ನೆರವೇರಿದವು. ಬಳಿಕ ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ಧರ್ಮಸಭೆ ನಡೆಯಿತು.
ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಚನ್ನವೀರ ಮಹಾಸ್ವಾಮಿಗಳು, ದೇವರ ಮೇಲೆ ಅಚಲ ಭಕ್ತಿ ಹಾಗೂ ನಂಬಿಕೆ ಇಟ್ಟು ಬದುಕಿದರೆ ಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಧಾರ್ಮಿಕ ಆಚರಣೆಗಳು ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತವೆ. ಮೂಕ ಬಸವೇಶ್ವರ ದೇವಸ್ಥಾನವು ಹಲವು ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಜಾಗೃತ ಕ್ಷೇತ್ರವಾಗಿದ್ದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎಲ್ಲರ ಕಾರ್ಯ ಸ್ತುತ್ಯರ್ಹವಾಗಿದೆ ಎಂದರು.
ಕರೇವಾಡಿಮಠದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಮಾನವ ಜನ್ಮ ಅತ್ಯಂತ ಪವಿತ್ರವಾದದ್ದು. ಪ್ರತಿಯೊಬ್ಬರೂ ಶ್ರದ್ಧೆ, ನಿಷ್ಠೆ ಹಾಗೂ ಸತ್ಯದ ಮಾರ್ಗದಲ್ಲಿ ಸಾಗಬೇಕು. ಭಕ್ತಿ ಮತ್ತು ಧಾರ್ಮಿಕ ಆಚರಣೆಗಳು ಉತ್ತಮ ಜೀವನಕ್ಕೆ ದಾರಿದೀಪವಾಗುತ್ತವೆ. ಮೂಕ ಬಸವೇಶ್ವರ ದೇವಸ್ಥಾನ ಭಕ್ತರ ಪಾಲಿಗೆ ಜಾಗೃತ ಕ್ಷೇತ್ರವಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಮೂಕ ಬಸವೇಶ್ವರ ದೇವಸ್ಥಾನದ ಇತಿಹಾಸ ಹಾಗೂ ಪವಾಡ ಪರಂಪರೆ ಭಕ್ತರಲ್ಲಿ ಅಪಾರ ನಂಬಿಕೆ ಮೂಡಿಸಿದೆ. ಇಲ್ಲಿ ಭಕ್ತಿಯಿಂದ ಪ್ರಾರ್ಥಿಸುವವರಿಗೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ ಎಂದು ಹೇಳಿದರು.
ಮುಖಂಡ ಟಿ. ಈಶ್ವರ ಮಾತನಾಡಿ, ಮೂಕ ಬಸವೇಶ್ವರ ದೇವಸ್ಥಾನ ಲಕ್ಷ್ಮೇಶ್ವರದ ಧಾರ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದೆ. ಜೀರ್ಣೋದ್ಧಾರ, ಕಳಸಾರೋಹಣ ಹಾಗೂ ನೂತನ ಮೂರ್ತಿಗಳ ಪ್ರತಿಷ್ಠಾಪನೆಯಿಂದ ದೇವಸ್ಥಾನದ ಪಾವಿತ್ರ್ಯ ಹಾಗೂ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ನಿತ್ಯ ಪೂಜೆ, ಪ್ರಾರ್ಥನೆ ನಡೆಯುವ ಮೂಲಕ ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕು ಎಂದರು.
ನಿಂಗಪ್ಪ ಬನ್ನಿ, ವಿ.ಜಿ. ಪಡಗೇರಿ, ಮೈಲಾರಗೌಡ ನರಸಮ್ಮನವರ, ನಿವೃತ್ತ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ, ಬಿ.ಕೆ. ನಾಗಲಾಂಬಿಕೆ, ಯಲ್ಲಮ್ಮ ದುರಗಣ್ಣವರ, ಪ್ರವೀಣ ಬಾಳಿಕಾಯಿ, ಕೆ.ಒ. ಹುಲಿಕಟ್ಟಿ, ಮಹೇಶ ಲಿಂಬಯ್ಯಸ್ವಾಮಿಮಠ, ಶಿವಪುತ್ರಪ್ಪ ಚಾಕಲಬ್ಬಿ, ಅಶೋಕ ಬಿಸೇರೊಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಓಣಿಯ ಹಿರಿಯರು, ಯುವಕರು, ಮಹಿಳೆಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಸ್.ಎಫ್. ಆದಿ ನಿರೂಪಿಸಿದರು.
ಮೂಕ ಬಸವೇಶ್ವರ ದೇವಸ್ಥಾನ ಹಲವು ಶತಮಾನಗಳ ಇತಿಹಾಸ ಹಾಗೂ ಪವಾಡ ಪರಂಪರೆ ಹೊಂದಿರುವ ಜಾಗೃತ ಕ್ಷೇತ್ರ. ಹಿಂದಿನಿಂದಲೂ ಭಕ್ತರು ಕ್ಷೇತ್ರದ ಮೇಲೆ ಇಟ್ಟುಕೊಂಡಿರುವ ಅಪಾರ ನಂಬಿಕೆ ಇಂದಿಗೂ ಮುಂದುವರಿದಿರುವುದು ಶ್ಲಾಘನೀಯ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಎಲ್ಲರ ಕಾರ್ಯ ಸ್ತುತ್ಯರ್ಹ.
— ಶ್ರೀ ಚನ್ನವೀರ ಮಹಾಸ್ವಾಮಿಗಳು



