ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಸ್ವಾತಂತ್ರ್ಯಕ್ಕಾಗಿ ಮನೆ, ಆಸ್ತಿ ಹಾಗೂ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್ ಅವರ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ಪ್ರಾಚಾರ್ಯೆ ಡಾ. ಗಂಗೂಬಾಯಿ ಪವಾರ ಹೇಳಿದರು.
ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಸಂಸ್ಮರಣಾ ವಿಶೇಷ ಕಾರ್ಯಕ್ರಮದಲ್ಲಿ ದೇಶಪ್ರೇಮಿ ವಿನಾಯಕ ದಾಮೋದರ ಸಾವರ್ಕರ್ ಕುರಿತು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಭಗೂರಿನಲ್ಲಿ ಜನಿಸಿದ ಸಾವರ್ಕರ್ ಬಾಲ್ಯದಿಂದಲೇ ದೇಶಭಕ್ತಿ ಹಾಗೂ ಸ್ವಾತಂತ್ರ್ಯದ ತುಡಿತ ಬೆಳೆಸಿಕೊಂಡಿದ್ದರು. ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಮುಕ್ತಗೊಳಿಸಬೇಕೆಂಬ ದೃಢ ಸಂಕಲ್ಪ ಹೊಂದಿದ್ದರು. ಶ್ರೇಷ್ಠ ಕ್ರಾಂತಿಕಾರಿ, ಕವಿ ಹಾಗೂ ರಾಜನೀತಿಜ್ಞರಾಗಿದ್ದ ಅವರು ‘ಅಭಿನವ ಭಾರತ’ ಸಂಸ್ಥೆ ಹಾಗೂ ನಾಸಿಕದಲ್ಲಿ ‘ಮಿತ್ರಮಂಡಳಿ’ ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟನಾ ಬಲ ನೀಡಿದ್ದರು ಎಂದರು.
1902ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣ ಮಹೋತ್ಸವ ಆಚರಿಸಿದ ಸಾವರ್ಕರ್, ಬ್ರಿಟಿಷರಿಂದ ಕಠಿಣ ‘ಕಾಲಾಪಾನಿ’ ಶಿಕ್ಷೆ ಅನುಭವಿಸಿದರೂ ತಮ್ಮ ಬರಹ ಹಾಗೂ ಕಾವ್ಯದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ತುಂಬಿದರು. ಅವರ ಜೀವನದಲ್ಲಿ ದೇಶಭಕ್ತಿ, ಧೈರ್ಯ, ತ್ಯಾಗ ಹಾಗೂ ದೃಢಸಂಕಲ್ಪ ಪ್ರಮುಖ ಸ್ಥಾನ ಪಡೆದಿದ್ದವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಇಡ್. ಪ್ರಶಿಕ್ಷಣಾರ್ಥಿಗಳು ವೀರ ಸಾವರ್ಕರ್ ಅವರ ಜೀವನದ ಪ್ರಮುಖ ಘಟನೆಗಳ ಕುರಿತು ಮಾತನಾಡಿದರು. ಸಾವರ್ಕರ್ ಅವರ ಜೀವನಾಧಾರಿತ ಚಲನಚಿತ್ರ ಪ್ರದರ್ಶಿಸಲಾಯಿತು. ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರೇಣುಕಾ ಚಿಮ್ಮನಕಟ್ಟಿ ಪ್ರಾರ್ಥಿಸಿದರು. ರುದ್ರೇಶ ಸ್ವಾಗತಿಸಿದರು. ಸಂತೋಷ ಐಹೊಳಿ ನಿರೂಪಿಸಿದರು. ಮೇಘಾ ಮುದ್ದಿ ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



