ದಾವಣಗೆರೆ: ಒಂದೇ ದಿನ ಇದ್ದಕ್ಕಿದ್ದಂತೆ 830 ನಾಟಿ ಕೋಳಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.
ಘಟನೆಯಿಂದ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತ ಕುಟುಂಬಗಳಿಗೆ ಭಾರೀ ನಷ್ಟ ಉಂಟಾಗಿದೆ.
ರಾಮಗೊಂಡನಹಳ್ಳಿಯ ಪ್ರಕಾಶ್ ಹಾಗೂ ಅರ್ಜುನ್ ಎಂಬ ರೈತರಿಗೆ ಸೇರಿದ ನಾಟಿ ಕೋಳಿಗಳು ಸಾವನ್ನಪ್ಪಿವೆ. ಕೋಳಿಗಳಿಗೆ ಯಾವುದೇ ರೋಗದ ಲಕ್ಷಣಗಳಿರಲಿಲ್ಲ. ಅಲ್ಲದೆ, ಆಹಾರ ನೀಡುವಲ್ಲಿಯೂ ಯಾವುದೇ ವ್ಯತ್ಯಾಸವಾಗಿರಲಿಲ್ಲ ಎಂದು ರೈತರು ತಿಳಿಸಿದ್ದಾರೆ.
ಆದರೆ ಬೆಳಗಾಗುವಷ್ಟರಲ್ಲಿ ನೂರಾರು ಕೋಳಿಗಳು ಏಕಾಏಕಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೋಳಿಗಳ ಸಾವಿನ ಹಿಂದೆ ದುಷ್ಕರ್ಮಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನು ರೈತರು ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಕೋಳಿಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಒಂದೇ ದಿನ ನೂರಾರು ಕೋಳಿಗಳನ್ನು ಕಳೆದುಕೊಂಡಿರುವುದರಿಂದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೋಳಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.



