ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಹುಕೋಟಿ ‘ಚಿನ್ನತಂಬಿ’ ಚಿನ್ನದ ಹಗರಣದ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಗೋಲ್ಡ್ ಸ್ಕ್ಯಾಮ್ ಬೆಳಕಿಗೆ ಬಂದಿದೆ.
ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ ಹಣ ಕಟ್ಟಿಸಿಕೊಂಡು 80ಕ್ಕೂ ಹೆಚ್ಚು ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.
ಮೈಸೂರು ನಗರದ ವಿವೇಕಾನಂದ ವೃತ್ತದಲ್ಲಿರುವ ‘ಮೋಹನ್ ಜ್ಯುವೆಲರಿ’ ಅಂಗಡಿಯ ಮಾಲೀಕ ಮೋಹನ್ ಲಾಲ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಗ್ರಾಹಕರಿಂದ ಮಾಸಿಕ ಕಂತು ಕಟ್ಟಿಸಿಕೊಂಡು, ಸರಿಯಾದ ಸಮಯಕ್ಕೆ ಚಿನ್ನ ನೀಡುವ ಮೂಲಕ ಮೋಹನ್ ಲಾಲ್ ಜನರ ನಂಬಿಕೆ ಗಳಿಸಿದ್ದ ಎನ್ನಲಾಗಿದೆ.
ಆತನ ಮಾತು ಹಾಗೂ ಯೋಜನೆಯನ್ನು ನಂಬಿದ 80ಕ್ಕೂ ಹೆಚ್ಚು ಗ್ರಾಹಕರು ಈ ಬಾರಿಯೂ ಚಿನ್ನದ ಆಸೆಯಿಂದ ಹೆಚ್ಚಿನ ಮೊತ್ತದ ಹಣವನ್ನು ಮಾಸಿಕ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಆದರೆ ಕಳೆದ ಒಂದು ವಾರದಿಂದ ಮೋಹನ್ ಜ್ಯುವೆಲರಿ ಅಂಗಡಿ ಬಾಗಿಲು ಮುಚ್ಚಿದ್ದು, ಮಾಲೀಕ ಮೋಹನ್ ಲಾಲ್ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಆತನ ಮನೆಯೂ ಖಾಲಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಹಕರು ಅಂಗಡಿಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಕಳೆದುಕೊಂಡ ಸಂತ್ರಸ್ತ ಗ್ರಾಹಕರು ತಕ್ಷಣ ಕುವೆಂಪುನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ವೇಳೆ, “ನಾವು ಕಷ್ಟಪಟ್ಟು ದುಡಿದು ಕಟ್ಟಿದ ಹಣವನ್ನು ನಮಗೆ ವಾಪಸ್ ಕೊಡಿಸಿ” ಎಂದು ಪೊಲೀಸರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.
ದೂರು ಸ್ವೀಕರಿಸಿದ ಕುವೆಂಪುನಗರ ಠಾಣೆ ಪೊಲೀಸರು ಜ್ಯುವೆಲರಿ ಮಾಲೀಕ ಮೋಹನ್ ಲಾಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು ಎಷ್ಟು ಮೊತ್ತದ ಹಣ ವಂಚನೆಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದು, ವಿಚಾರಣೆ ಬಳಿಕ ವಂಚನೆಯ ಸಂಪೂರ್ಣ ಮೊತ್ತ ಹಾಗೂ ಪ್ರಕರಣದ ಹೆಚ್ಚಿನ ವಿವರಗಳು ಹೊರಬರಲಿವೆ.

