ಬೆಂಗಳೂರು: ಆಫ್ರಿಕಾದ ಚಿನ್ನದ ಗಣಿಗಾರಿಕೆ ಸಂಸ್ಥೆಯಲ್ಲಿ ಶೇ.40ರಷ್ಟು ಪಾಲು ಇದೆ ಎಂದು ಇಡಿ ಹೇಳಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ತಮ್ಮ ಬಳಿ ಅಥವಾ ತಮ್ಮ ಕುಟುಂಬದ ಬಳಿ ಆಫ್ರಿಕಾದ ಚಿನ್ನದ ಗಣಿಗಳಲ್ಲಿ ಪಾಲು ಇದೆ ಎಂಬುದಕ್ಕೆ ಇಡಿ ಬಳಿ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಹೇಳಿದ್ದಾರೆ.
ಬೆಂಗಳೂರು ನಿವಾಸದ ಬಳಿ ಮಾತನಾಡಿದ ಸತೀಶ್ ಜಾರಕಿಹೊಳಿ, ಇಡಿ ಮಾಧ್ಯಮ ಪ್ರಕಟಣೆಯಲ್ಲಿ ಹೂಡಿಕೆ ಹಾಗೂ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದರು. ಇಡಿ ನೋಟಿಸ್ ನೀಡಿದರೆ ತಾವು ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎಲ್ಲದಕ್ಕೂ ಸ್ಪಷ್ಟೀಕರಣ ನೀಡುವುದಾಗಿ ಹೇಳಿದರು.
ಇಡಿ ಹೊರಡಿಸಿರುವ ಪ್ರೆಸ್ ನೋಟ್ನಲ್ಲೇ ‘ಶಂಕೆ’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಪ್ರಕರಣ ಇನ್ನೂ ಅಂತಿಮವಾಗಿಲ್ಲ. ಇಡಿ ನೋಟಿಸ್ ನೀಡಿ ವಿಚಾರಣೆಗೆ ಕರೆದರೆ ಹೋಗಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪಿಡಬ್ಲ್ಯುಡಿ ಇಲಾಖೆಯಲ್ಲಿ ಲಂಚ ಪಡೆದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಇಡಿ ಕೇವಲ ಶಂಕೆ ವ್ಯಕ್ತಪಡಿಸಿದೆ. ಮೊದಲು ವಿಚಾರಣೆ ನಡೆಯಲಿ, ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ವಿಚಾರಣೆಗೆ ಹಾಜರಾಗಿ ಅಗತ್ಯ ಸ್ಪಷ್ಟೀಕರಣ ನೀಡುತ್ತೇವೆ ಎಂದರು.
ಇಡಿ ಪ್ರೆಸ್ ನೋಟ್ನಿಂದ ರಾಜಕೀಯವಾಗಿ ಹಾನಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಸಾಮಾನ್ಯವಾಗಿ ಇಂತಹ ಆರೋಪಗಳಿಂದ ಹಾನಿಯಾಗುತ್ತದೆ. ಆದರೆ ಇಡಿ ಸ್ವತಃ ‘ಶಂಕೆ’ ಎಂದು ಹೇಳಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ನೋಡೋಣ ಎಂದರು. ‘ಇಡಿಗಿಂತ ಮೊದಲು ಪಬ್ಲಿಕ್ ನಮ್ಮ ನ್ಯಾಯಾಲಯ’ ಎಂದು ಹೇಳಿದರು.
ಇನ್ನು ಇಡಿಗೆ ದೂರು ನೀಡಿದವರ ಬಗ್ಗೆ ಮಾತನಾಡಿದ ಅವರು, ದೂರು ನೀಡಿರುವವರು ಯಾರು ಎಂಬುದು ತಮಗೆ ಗೊತ್ತಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ನೋಡಿಕೊಳ್ಳುತ್ತಾರೆ ಎಂದರು. ದೂರುದಾರರಿಗೆ ಕಾಂಗ್ರೆಸ್ನೊಂದಿಗೆ ಸಂಬಂಧವಿರುವುದಷ್ಟೇ, ಅವರ ಮತಗಳು ಬಿಜೆಪಿಯಲ್ಲಿವೆ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.



