ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಗುವಿನ ಕೈ ಹಿಡಿದು ಶಾಲೆಗೆ ಕಳುಹಿಸುವುದಷ್ಟೇ ಪಾಲಕರ ಜವಾಬ್ದಾರಿಯಲ್ಲ. ಮಕ್ಕಳ ಕನಸುಗಳಿಗೆ ದಾರಿ ತೋರಿಸುವುದು, ನಡವಳಿಕೆ ಮತ್ತು ಅಭ್ಯಾಸ ಗಮನಿಸುವುದು ಹಾಗೂ ಕಲಿಕೆಯ ಹಾದಿಯಲ್ಲಿ ಶಿಕ್ಷಕರೊಂದಿಗೆ ಹೆಜ್ಜೆ ಹಾಕುವುದು ಕೂಡ ಪಾಲಕರ ಕರ್ತವ್ಯ ಎಂದು ಡಯಟ್ನ ನಿವೃತ್ತ ಉಪನ್ಯಾಸಕ ಕೆ.ಪಿ. ಸಾಲಿಮಠ ಹೇಳಿದರು.
ಪಟ್ಟಣದ ಶ್ರೀ ಕೃಷ್ಣಾಜಿ ರಂಗರಾವ್ ಕುಲಕರ್ಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳ ಕಲಿಕಾ ಪ್ರಗತಿ ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗುವುದಿಲ್ಲ. ಮನೆಯಲ್ಲಿ ಪಾಲಕರು ನೀಡುವ ಸಮಯ, ಪ್ರೋತ್ಸಾಹ ಹಾಗೂ ಕಲಿಕೆಗೆ ಕಲ್ಪಿಸುವ ವಾತಾವರಣವೂ ಮಹತ್ವದ್ದು. ಪಾಲಕರು ಮಕ್ಕಳ ಗೃಹಪಾಠ, ಗೈರುಹಾಜರಿ, ನಡವಳಿಕೆ ಹಾಗೂ ಕಲಿಕೆಯಲ್ಲಿನ ಏರುಪೇರುಗಳನ್ನು ಗಮನಿಸಿ, ಸಮಸ್ಯೆ ಕಂಡುಬಂದಾಗ ಶಿಕ್ಷಕರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ನೀಡುತ್ತಿರುವ ಸಹಕಾರ ಶಿಕ್ಷಣದ ಮೇಲಿನ ಸಮಾಜದ ಕಾಳಜಿಗೆ ಸಾಕ್ಷಿಯಾಗಿದೆ. ಶ್ರಾವಣ ಮಾಸದಲ್ಲಿ ದಾನಿಗಳ ಸಹಕಾರದಿಂದ ನಡೆದ ಒಂದು ತಿಂಗಳ ‘ಅಮೃತ ಭೋಜನ’ ಕಾರ್ಯಕ್ರಮವೂ ಇದಕ್ಕೆ ಉದಾಹರಣೆ. ಸಮಾಜದ ಸೌಲಭ್ಯ ಮತ್ತು ಸಹಕಾರವನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕ ಎಸ್.ಬಿ. ನಿಡಗುಂದಿ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ನಿಡಗುಂದಿ, ನರೇಗಲ್ಲ ಹಾಗೂ ಅಬ್ಬಿಗೇರಿ ಕ್ಲಸ್ಟರ್ನ 15 ಶಾಲೆಗಳ ಪೈಕಿ ತಮ್ಮ ಶಾಲೆ ಶೇ.100ರಷ್ಟು ಎಸ್ಎಸ್ಎಲ್ಸಿ ಫಲಿತಾಂಶ ದಾಖಲಿಸಿದ ಏಕೈಕ ಶಾಲೆಯಾಗಿದೆ. ಈ ಸಾಧನೆಯನ್ನು ಮುಂದುವರಿಸಿ ಪ್ರಸಕ್ತ ಸಾಲಿನಲ್ಲೂ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಹಾಗೂ ನಿರಂತರ ಪರಿಶ್ರಮದಿಂದ ಅಭ್ಯಾಸ ಮಾಡಿ ಶಾಲೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು ಎಂದರು.
ಸಭೆಯಲ್ಲಿ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಕೆ.ಪಿ. ಸಾಲಿಮಠ ಸಂವಾದ ನಡೆಸಿ, ಮಕ್ಕಳ ಕಲಿಕಾ ಪ್ರಗತಿ, ಗೃಹಪಾಠ, ಗೈರುಹಾಜರಿ ಮತ್ತು ನಡವಳಿಕೆ ಕುರಿತು ಚರ್ಚಿಸಿದರು. 50ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆ ಮತ್ತು ಮನೆ ಪರಸ್ಪರ ಕೈಜೋಡಿಸಬೇಕು. ಪಾಲಕರು ಮಕ್ಕಳಿಗೆ ಸಮಯ ನೀಡಿ, ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಗ ಅವರ ಕಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಪರಿಹರಿಸಲು ಸಾಧ್ಯ.
— ಕೆ.ಪಿ. ಸಾಲಿಮಠ, ನಿವೃತ್ತ ಉಪನ್ಯಾಸಕ, ಡಯಟ್



