ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಶ್ರಾವಣ ಮಾಸದ ಶ್ರೀ ಜ್ಞಾನೇಶ್ವರಿ ಪಾರಾಯಣದ 25ನೇ ವರ್ಷದ ರಜತ ಮಹೋತ್ಸವ ಶನಿವಾರ ಭಕ್ತಿಭಾವದಿಂದ ನೆರವೇರಿತು.
ಬೆಳಗ್ಗೆ ಕಾಕಡಾ ಆರತಿ, ಜ್ಞಾನೇಶ್ವರಿ ಪಾರಾಯಣ, ಪ್ರವಚನ, ನಾಮಜಪ, ಕೀರ್ತನೆ ಹಾಗೂ ವಿಶೇಷ ಪೂಜೆಗಳು ನಡೆದವು. ಬಳಿಕ ಪಾಂಡುರಂಗನ ಉತ್ಸವ ಮೂರ್ತಿ ಹಾಗೂ ಜ್ಞಾನೇಶ್ವರಿ ಗ್ರಂಥದ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪಾಂಡುರಂಗನ ಭಜನೆಗೆ ಹೆಜ್ಜೆ ಹಾಕಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪಾಂಡುರಂಗ-ರುಕ್ಮಾಯಿ ವೇಷ ಧರಿಸಿದ್ದ ಮಕ್ಕಳು ಥೇಟ್ ದೇವರನ್ನೇ ಹೋಲುವಂತೆ ಕಂಗೊಳಿಸಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದರು.
ಪುಂಡಲೀಕರಾವ್ ಮಾತಾಡೆ, ಸರೋಜಮ್ಮ ನವಲೆ, ಕಿರಣ ನವಲೆ, ನಾಗೇಶ ಮಾಳದಕರ, ವಾಸು ಬೋಮಲೆ, ಪ್ರಭು ಬೋಮಲೆ, ರಮೇಶ ನವಲೆ, ಅರುಣ ನವಲೆ, ಸಂತೋಷ ಸರ್ವದೆ, ಸತೀಶ ಮಾಂಡ್ರೆ, ಪ್ರಭಾಕರ ಮಾಂಡ್ರೆ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ, ಭಜನಾ ಮಂಡಳಿಗಳ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.



