ವಿಜಯಸಾಕ್ಷಿ ಸುದ್ದಿ, ಗದಗ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಸೆ. 15ರಂದು ಅಭಿಯಂತರರ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿದೆ ಎಂದು ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನಿಯೋಜಿತ ಜಿಲ್ಲಾಧ್ಯಕ್ಷ ಮಹಮ್ಮದರಫಿ ನದಾಫ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 15ರಂದು ಬೆಳಗ್ಗೆ 10.30ಕ್ಕೆ ಕಳಸಾಪುರ ರಿಂಗ್ರೋಡ್ ಬಳಿಯ ಸರ್ ಎಂ. ವಿಶ್ವೇಶ್ವರಯ್ಯ ಟೆಕ್ನಿಕಲ್ ಸೆಂಟರ್ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅಭಿನವ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎ.ಐ. ನಾಯ್ಕ್, ಅಶೋಕ ರೆಡ್ಡಿ ಕೊಲ್ಲೂರ, ಸುಭಾಷ್ ವಿ. ಗುಗ್ಗರಿ ಅತಿಥಿಗಳಾಗಿ ಭಾಗವಹಿಸಲಿದ್ದು, ಬಸವರಾಜ ಮಲ್ಲಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಘದ ಸದಸ್ಯ ಮಲ್ಲಿಕಾರ್ಜುನ ಐಲಿ ಮಾತನಾಡಿ, ಹೊಸ ವಿಚಾರಗಳು ಹಾಗೂ ತಾಂತ್ರಿಕ ಜ್ಞಾನ ಹಂಚಿಕೊಳ್ಳುವ ಉದ್ದೇಶದಿಂದ ತಾಂತ್ರಿಕ ಕೇಂದ್ರ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, ನಿರ್ಮಾಣಕ್ಕೆ ಶ್ರಮಿಸಿದವರು ಹಾಗೂ ದಾನಿಗಳನ್ನು ಸನ್ಮಾನಿಸಲಾಗುವುದು. ದೇಣಿಗೆ ನೀಡಿದವರ ಭಾವಚಿತ್ರ ಅನಾವರಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜು ಗುಡಸಾಲಿ, ಲೋಹಿತ್ ಶಾವಿ, ಬಸವರಾಜ ಮಲ್ಲಣ್ಣನವರ, ಎಸ್.ಎಸ್. ಚವಡಿ, ಝಡ್.ಎಂ. ಗುಲಗುಂದಿ, ಅಕ್ಷಯ್ ಗಾಳಪ್ಪನವರ, ರವಿ ಗಂಜಿ, ಪ್ರಕಾಶ್ ಆಸಂಗಿ, ನರೇಂದ್ರ ಚಿಕ್ಕನಗೌಡ್ರ, ಆರ್.ಎಫ್. ಡಾಲಾಯತ್ ಉಪಸ್ಥಿತರಿದ್ದರು.
ಪ್ರತಿಮೆ ಅನಾವರಣ
ಅಭಿಯಂತರರ ದಿನಾಚರಣೆ ಅಂಗವಾಗಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಅನಾವರಣಗೊಳ್ಳಲಿದೆ. ಪ್ರತಿಮೆ ನಿರ್ಮಾಣಕ್ಕೆ ರಾಜು ಕೆ. ಗುಡಸಾಲಿ, ಜಿಶಾನ್ ಎಂ. ಗುಳಗುಂದಿ ಹಾಗೂ ಸುಧಾಕರ ಎನ್. ಮಾದಗುಂಡಿ ಶ್ರಮಿಸಿದ್ದಾರೆ.



