ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಚ್. ಪಾಟೀಲ ವೃತ್ತದಲ್ಲಿ ಸುದರ್ಶನ ಯುವ ಮಂಡಳ ವತಿಯಿಂದ ಸೆ. 14ರಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗುವುದು. ಸೆ. 16ರಂದು ನಡೆಯುವ ರಸಮಂಜರಿ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಮಂಡಳದ ಗೌರವಾಧ್ಯಕ್ಷ ವಿನಾಯಕ ಮಾನ್ವಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಕಲ್ಯಾಣಕ್ಕಾಗಿ ಸಂಕಲ್ಪದೊಂದಿಗೆ ಗಣಪತಿ ಆರಾಧನೆ ಆಯೋಜಿಸಲಾಗಿದೆ. ಸೆ. 14ರಂದು ಸಂಜೆ 6ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಸೆ. 16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಡಿಜೆ ಇರಲಿದೆ ಎಂದರು.
ಗಣೇಶೋತ್ಸವದ ಅಂಗವಾಗಿ ಸೆ. 19ರಂದು ಗಣಹೋಮ, ಸೆ. 20ರಂದು ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ, ಸೆ. 21ರಂದು ರುದ್ರಪಠಣ, ಸೆ. 22ರಂದು ಮಕ್ಕಳಿಗಾಗಿ ವಿವಿಧ ಆಟ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸೆ. 23ರಂದು ಧರ್ಮಸಭೆ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ಸೆ. 24ರಂದು ಲಲಿತಾ ಸಹಸ್ರನಾಮ ಪಠಣ, ಸೆ. 25ರಂದು ರಂಗೋಲಿ ಸ್ಪರ್ಧೆ ಹಾಗೂ ಸೆ. 26ರಂದು ವಿಶೇಷ ರಂಗೋಲಿ ಕಾರ್ಯಕ್ರಮ ನಡೆಯಲಿದೆ.
ಸೆ. 30ರಂದು ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಲಕ್ಷದೀಪೋತ್ಸವ ಹಾಗೂ ಕುಂಕುಮಾರ್ಚನೆ ನಡೆಯಲಿವೆ. ಅ. 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅ. 3ರಂದು ವಿಶೇಷ ಕಾರ್ಯಕ್ರಮದ ಬಳಿಕ ಅ. 4ರಂದು ಗಣೇಶ ಮೂರ್ತಿ ವಿಸರ್ಜನೆ ನೆರವೇರಲಿದೆ.
ಮಂಡಳದ ಸದಸ್ಯ ರಾಘವೇಂದ್ರ ಹಬೀಬ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಗಣೇಶೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬಡ ಕುಟುಂಬಗಳ ಮಕ್ಕಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಕಾರ್ಯಕ್ಕೆ ಈ ಬಾರಿಯೂ ಆದ್ಯತೆ ನೀಡಲಾಗಿದೆ. ಅಗತ್ಯವಿರುವ ಮಕ್ಕಳನ್ನು ಗುರುತಿಸಿ ಚಿಕಿತ್ಸೆ, ಊಟ, ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸಮಿತಿ ವತಿಯಿಂದ ಕಲ್ಪಿಸಲಾಗುವುದು ಎಂದರು.
ಸೆ. 23ರಂದು ನಡೆಯುವ ಧರ್ಮಸಭೆಯಲ್ಲಿ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಕಾನೂನು ಪಾಲನೆ, ಶಾಂತಿ ಹಾಗೂ ಸೌಹಾರ್ದ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಆಯೋಜಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಮಲೇಶ ಜೈನ್, ಶಿವು ಪೂಜಾರ, ವಿಜಯಕುಮಾರ ಹಿರೇಮಠ, ಶಂಕರ ದಹಿಂಡೆ, ಬಸವರಾಜ ಅಳಗವಾಡಿ, ಮಾರುತಿ, ಅಶ್ವಿನಿ ಸೇರಿದಂತೆ ಮಂಡಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.



