ವಿಜಯಸಾಕ್ಷಿ ಸುದ್ದಿ, ಹಾವೇರಿ
ಕರಾವಳಿ ಭಾಗದಲ್ಲಿ ನಡೆದ ಯುವಕನ ಹತ್ಯೆಯ ಘಟನೆ ತುಂಬಾ ನೋವಿನ ಸಂಗತಿ. ಇಂಥಾ ಘಟನೆಗಳು ಎಲ್ಲಿಯೂ ನಡೆಯಬಾರದು. ಇಂಥ ಸಮಯದಲ್ಲಿ ಇಂಟಲಿಜೆನ್ಸ್ನವರು ಪೊಲೀಸ್ ಇಲಾಖೆಗಿಂತ ಹೆಚ್ಚು ಶೀಘ್ರವಾಗಿ ಕೆಲಸ ಮಾಡಿ ಸರಕಾರಕ್ಕೆ ಮಾಹಿತಿ ಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಖೇದ ವ್ಯಕ್ತಪಡಿಸಿದರು.
ಅವರು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಇಂಥ ಘಟನೆಗಳು ನಡೆಯಬಾರದಿತ್ತು. ಆದರೆ ನಡೆಯುತ್ತಲೇ ಇವೆ. ಯಾವುದೇ ಜಾತಿಯಿರಲಿ, ಏನೇ ಇರಲಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂಥ ಘಟನೆಗಳಲ್ಲಿ ಆರೋಪಿತರಿಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಇವತ್ತಿನರವೆಗೂ ಗೊತ್ತಾಗಿಲ್ಲ. ಸೂಕ್ತ ಶಿಕ್ಷೆ ಆದಾಗ ಮಾತ್ರ ಇಂಥ ಘಟನೆಗಳು ಕಡಿಮೆಯಾಗುತ್ತವೆ.
ಆದರೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಎಂದು ಹಲವಾರು ಕಾನೂನುಗಳ ಕಾರಣಕ್ಕೆ ಶಿಕ್ಷೆ ನಿಧಾನವಗುತ್ತಿದೆ. ಹತ್ತು-ಹದಿನೈದು ವರ್ಷ ಕಳೆಯುವದರಲ್ಲಿ ಜನರು ಅದನ್ನು ಮರೆತುಬಿಡುತ್ತಾರೆ ಎಂದು ವಿಷಾದಿಸಿದರು.
ಮುಂದುವರೆದ ಅವರು, ಹಿಂದೊಮ್ಮೆ ನಾನು ಇಸ್ರೇಲ್ಗೆ ಹೋಗಿದ್ದೆ. ಅಲ್ಲಿಯ ಕಾನೂನು ಹೇಗಿದೆಯೆಂದರೆ, ಬೆಳಿಗ್ಗೆ ಇಂಥಾ ಘಟನೆಯಾದರೆ ಸಂಜೆಯ ವೇಳೆಗೇ ಅಪರಾಧಿಗಳಿಗೆ ಗಲ್ಲುಶಿಕ್ಷೆಯ ತೀರ್ಪು ಬರುತ್ತದೆ. ನಮ್ಮಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಬಾರದು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಶಿಕ್ಷೆ ಆಗಿದ್ದನ್ನು ಜನರಿಗೆ ಗೊತ್ತು ಮಾಡಿಕೊಡಬೇಕು.
ಹಾಗಾದರೆ ಮಾತ್ರ ಇಂಥ ಘಟನೆಗಳು ಮರುಕಳಿಸದಂತೆ ತಡೆಬಹುದು. ಇಂಥ ಸಮಯದಲ್ಲಿ ಎಲ್ಲ ಪಕ್ಷಗಳೂ ಒಂದಾಗಿ ನಾಡಿನಲ್ಲಿ ಶಾಂತಿ ಕಾಪಾಡಬೇಕೇ ಹೊರತು ಒಬ್ಬರನ್ನೊಬ್ಬರು ಎತ್ತಿ ಕಟ್ಟುವ ಪರಿಸ್ಥಿತಿ ಬರಬಾರದು ಎಂದರು.
ವಿರೋಧ ಪಕ್ಷ ಕೇವಲ ಟೀಕೆ ಮಾಡುತ್ತಾ ಕುಳಿತರೆ ಸರಿಯಲ್ಲ. ಮುಖ್ಯಮಂತ್ರಿಗಳು ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆದು ಮುಂದೆ ಇಂಥ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸಿ, ಅದನ್ನು ಮಾಧ್ಯಮದ ಮೂಲಕ ಜನರಿಗೆ ಗೊತ್ತಾಗುವಂತೆ ಮಾಡಬೇಕು. ಹಾಗಾದಾಗ ಇಂಥಾ ಘಟನೆಗಳು ಮತ್ತೆ ನಡೆಯೋದಿಲ್ಲ.
ಕೋಳಿ, ಕುರಿಗಿಂತ ಮನುಷ್ಯನ ಜೀವನ ಕನಿಷ್ಠವಾದ ಹಾಗಾಗಿದೆ. ಹೈದರಾಬಾದ್ನಲ್ಲಿ ನಮ್ಮ ಸಜ್ಜನ ಶೂಟೌಟ್ ಮಾಡಲಿಲ್ಲವೇನು? ಇಂಥ ಸಮಯದಲ್ಲಿ ಪೊಲೀಸರು ಸಣ್ಣ ತಪ್ಪು ಮಾಡಿದರೂ ಹತ್ಯೆಯಂಥಹ ಘಟನೆಗಳು ಸಂಭವಿಸುವದು ನಿಂತರೆ ನಾನೇನೂ ಅದನ್ನು ತಪ್ಪೆನ್ನುವದಿಲ್ಲ ಎಂದು ಹೇಳಿದರು.



