ದುರ್ಘಟನೆ ನೆನೆದು ಕಣ್ಣೀರಾದ ಸ್ಥಳೀಯರು…
ವಿಜಯಸಾಕ್ಷಿ ಸುದ್ದಿ, ಗದಗ/ ಬೆಂಗಳೂರು
ಬೆಂಗಳೂರು ನಾಗವಾರ ಬಳಿ (ಹೆಣ್ಣೂರು ಕ್ರಾಸ್) ನಡೆಯುತ್ತಿದ್ದ ಎರಡನೇ ಹಂತದ ಮೆಟ್ರೋ ಕಾಮಗಾರಿ ವೇಳೆ ಕಬ್ಬಿಣದ ಸರಳುಗಳ ಪಿಲ್ಲರ್ ಕುಸಿದು ತಾಯಿ ಹಾಗೂ ಮಗು ಮೃತಪಟ್ಟ ದುರ್ಘಟನೆ ಮಂಗಳವಾರ ಜರುಗಿದೆ.
ಗದಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಗದಗನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನಿವೃತ್ತಿಯಾಗಿರುವ ವಿಜಯಕುಮಾರ್ ಸುಲಾಖೆ ಅವರ ಹಿರಿಯ ಮಗ ಲೋಹಿತ್ ಸುಲಾಖೆ ಅವರ ಪತ್ನಿ ತೇಜಸ್ವಿನಿ (23) ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟ ದುರ್ಧೈವಿಗಳು.
ಬೈಕ್ ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.
ಗದಗ ನಗರದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಗಳಾಗಿದ್ದ ವಿಜಯಕುಮಾರ್ ಸುಲಾಖೆ ಅವರು ಕಳೆದ ಆರು ವರ್ಷಗಳ ಹಿಂದೆ ಗದಗನಿಂದ ಬೆಂಗಳೂರಿಗೆ ಶಿಪ್ಟ್ ಆಗಿದ್ದರು.

ವಿಜಯಕುಮಾರ್ ಸುಲಾಖೆ ಅವರ ಹಿರಿಯ ಮಗ ಲೋಹಿತ್ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ.
ಈ ಕುರಿತು ಬೆಂಗಳೂರಿನ ಗೋವಿಂದಪುರ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಐಪಿಸಿ 337,338,427,34 ಅನ್ವಯ ಪ್ರಕರಣ ದಾಖಲಾಗಿದೆ.
ಕಣ್ಣೀರಾದ ಸ್ಥಳೀಯರು
ಮಂಗಳವಾರ ಮಧ್ಯಾಹ್ನ ಘಟನೆಯ ಸುದ್ದಿ ತಿಳಿದು ಸಿದ್ದರಾಮೇಶ್ವರ ಬಡಾವಣೆಯ ಜನ ಕಣ್ಣೀರಾದರು.
ಸುಲಾಖೆ ಅವರ ಕುಟುಂಬದೊಂದಿಗೆ ಒಡನಾಟ ಹೊಂದಿದ್ದ ಸ್ಥಳೀಯರು, ತೇಜಸ್ವಿನಿ ಹಾಗೂ ಮಗು ಮೃತಪಟ್ಟ ಸುದ್ದಿ ಕೇಳಿ ಅಘಾತಗೊಂಡಿದ್ದಾರೆ.

ಇತ್ತೀಚೆಗೆ ಅಷ್ಟೇ ಬೆಂಗಳೂರಿನಿಂದ ಬಂದು ಹೋಗಿದ್ದನ್ನು ನೆನಪು ಮಾಡಿಕೊಂಡು ಮಮ್ಮಲ ಮರಗಿದರು.
ಘಟನೆಯ ಕುರಿತು ಮಾತನಾಡಿದ ಸಚಿವ ಸಿ
ಸಿ ಪಾಟೀಲ, ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕುಟುಂಬದವರಿಗೆ ಪರಿಹಾರ ದೊರಕಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ನ ಹಿರಿಯ ಮುಖಂಡ, ಶಾಸಕ ಎಚ್. ಕೆ. ಪಾಟೀಲ ಮಾತನಾಡಿ, ಬೇಜವಬ್ದಾರಿ ಕೆಲಸದಿಂದ ಎರಡು ಜೀವಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದು ದುರ್ದೈವದ ಸಂಗತಿಯಾಗಿದ್ದು, ಸರಕಾರ ಮೃತರ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಮೃತರ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದರು.