ಜಮೀನಿಗೆ ಹೊರಟಿದ್ದ ಮಂಜುನಾಥ್…….
ವಿಜಯಸಾಕ್ಷಿ ಸುದ್ದಿ, ಗದಗ
ತನ್ನ ಜಮೀನಿಗೆ ನಡೆದುಕೊಂಡು ಹೊರಟಿದ್ದ ರೈತನೊಬ್ಬನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರೈತ ಮೃತಪಟ್ಟ ಘಟನೆ ಜರುಗಿದೆ.
ಇಲ್ಲಿನ ಹೊಂಬಳ ರಸ್ತೆಯ ಇಟಗಿ ಎಂಬುವರ ಜಮೀನಿನ ಬಳಿ ಭಾನುವಾರ ರಾತ್ರಿ ಒಕ್ಕಲಿಗೇರಿ ಓಣಿಯ ಮಂಜುನಾಥ ಯಲ್ಲಪ್ಪ ಕಂಬಳಿ (29)ಎಂಬಾತ ತನ್ನ ಜಮೀನಿಗೆ ನಡೆದುಕೊಂಡು ಹೊರಟಿದ್ದ.
ಆಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಮಂಜುನಾಥಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಕುರಿತು ಮೃತನ ತಂದೆ ಯಲ್ಲಪ್ಪ ಪಕ್ಕೀರಪ್ಪ ಕಂಬಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನದ ಶೋಧ ನಡೆಸಿದ್ದಾರೆ.