ಹುಬ್ಬಳ್ಳಿ: ಮೀಸಲಾತಿ ವಿಚಾರದಲ್ಲಿ ಎಲ್ಲ ವರ್ಗದವರಿಗೆ ಮೀಸಲಾತಿ ಕೊಡಲಾಗುವುದು ಎಂದು ಹೇಳಿ ಚಾಕಲೇಟ್ ಹಂಚಿಕೆ ಮಾಡಿದ ಹಾಗೇ ಬಿಜೆಪಿಯವರು ಮಾಡಿ ಹೋದರು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ಗಂಭೀರ ಸ್ವರೂಪದ ಆರೋಪ ಮಾಡಿದರು.
ಡಾ.ಸದಾಶಿವ ಆಯೋಗ ಜಾರಿ ವಿಚಾರ ಕುರಿತು ಮಾತನಾಡಿದ ಅವರು, ಡಾ. ಸದಾಶಿವ ಆಯೋಗ ವರದಿ ಜಾರಿ ಮಾಡುವುದು ನಮ್ಮ ಆದ್ಯ ಕರ್ತವ್ಯ. ಡಾ.ಸದಾಶಿವ ವರದಿ ಜಾರಿ ಮಾಡುವುದು 2-3 ದಶಕಗಳ ಕಾಲದ್ದು ಈಗಿನದು ಅಲ್ಲಾ ಎಂದರು.
ಭಾರತೀಯ ಜನತಾ ಪಕ್ಷದವರು ಡಾ. ಸದಾಶಿವ ಆಯೋಗ ವರದಿ ತಿರಸ್ಕಾರ ಮಾಡಿದ್ದಾರೆ. ಅವರು ಮೀಸಲಾತಿ ವಿಚಾರದಲ್ಲಿ ಕಾಟಾಚಾರಕ್ಕೆ ಮೀಸಲಾತಿ ಜಾರಿ ಮಾಡಿದ್ದಾರೆ. ನಾವು ಚುನಾವಣಾ ಸಂದರ್ಭದಲ್ಲಿ ಮಾತು ಕೊಟ್ಟಿದ್ದೇವೆ. ಈ ಕುರಿತು ಚಿತ್ರದುರ್ಗದ ಸಮಾವೇಶದಲ್ಲಿ ಡಾ.ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿ ಮಾಡುತ್ತೇವೆ ಅಂತಾ ಮಾತುಕೊಟ್ಟಿದ್ದೇವು. ಮೀಸಲಾತಿ ಜಾರಿಗೆ ಅಧಿವೇಶನದಲ್ಲಿ ಮಂಡನೆ ಮಾಡುತ್ತೇವೆ ಅಂತಾ ಹೇಳಿದರು.
ಮೀಸಲಾತಿ ಜಾರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಏಳು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ಆಗಿದ್ದು ಮೀಸಲಾತಿ ಜಾರಿ ವಿಚಾರದಲ್ಲಿ ಕಾನೂನು ಸಲಹೆ ಅಗತ್ಯವಾಗಿದ್ದು, ಕಾನೂನು, ಸಂವಿಧಾನದ ವ್ಯಾಪ್ತಿಯಲ್ಲಿ ಚರ್ಚೆ ಆಗಬೇಕು.
ಈ ಕುರಿತು ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು, ಕಾನೂನು ತಜ್ಞರು ಹಿರಿಯರ ಜೊತೆಗೆ ಚರ್ಚೆ ಮಾಡಬೇಕಾಗಿದೆ. ಯಾವುದೇ ರೀತಿಯ ಕಾನೂನು ತೊಡಕುಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.