ಬೆಂಗಳೂರು:- 7 ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ನಮ್ಮ ಅನುಮಾನವಿದೆ. ಹಾಗಾಗಿ ಹೊಸದಾಗಿ ಜಾತಿ ಗಣತಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ನಡೆಯಬೇಕು.
ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ದೊರೆಯಬೇಕು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ನಮ್ಮ ಸಹಮತ ಇದೆ. ಆದರೆ ಏಳು ವರ್ಷಗಳ ಹಿಂದೆ ನಡೆದ ಗಣತಿ ಬಗ್ಗೆ ಅನುಮಾನ ಇದೆ. ಮನೆ ಮನೆಗಳಿಗೆ ಭೇಟಿ ನೀಡಿ ಗಣತಿ ಮಾಡಿಲ್ಲ ಎಂಬ ದೂರುಗಳು ಇವೆ. ಕೆಲವರು ಸರ್ಕಾರಿ ಸೌಲಭ್ಯಕ್ಕಾಗಿ ಜಾತಿ ಬಳಕೆ ಮಾಡುತ್ತಿದ್ದಾರೆ. ನಡೆದಿರುವ ಜಾತಿ ಗಣತಿಯ ಕುರಿತು ಇರುವ ಅನುಮಾನಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ನಮ್ಮ ಮನವಿಯನ್ನು ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.



