ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದೇವಸ್ಥಾನಗಳು ಮನುಷ್ಯರಲ್ಲಿ ಧರ್ಮ, ಸಂಸ್ಕೃತಿ, ಸತ್ಯ, ನ್ಯಾಯ-ನೀತಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣ ಶಕ್ತಿ ಕೇಂದ್ರಗಳಾಗಿವೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಗುರುವಾರ ಪಟ್ಟಣದ ಮುಕ್ತಿಮಂದಿರ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಹತ್ತಿರ ನಿರ್ಮಾಣಗೊಂಡ ಶ್ರೀ ಶನೇಶ್ವರ, ಗಣಪತಿ, ಆಂಜನೇಯ, ನಾಗದೇವತೆಗಳ ದೇವಸ್ಥಾನ ಉದ್ಘಾಟನೆ ನೆರವೇರಿಸಿ ಅಶೀರ್ವಚನ ನೀಡಿ, ನಾಡಿನ ದೇವಾಲಯಗಳು ಶಾಂತಿ-ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಮನುಷ್ಯರಿಗೆ ದೇವಾಲಯಗಳ ಮೇಲಿರುವ ನಂಬಿಕೆ, ದೇವರಲ್ಲಿಟ್ಟಿರುವ ಶ್ರದ್ಧೆ ಅಪಾರ.
ಹರಿಯುವ ನೀರಿಗೆ, ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು. ದೇವರು ಎಲ್ಲೆಡೆ ತುಂಬಿದ್ದರೂ ನಾವು ಗುರುತಿಸಲು ಅಸಮರ್ಥರಾಗುತ್ತಿದ್ದೇವೆ. ಬೀಸುವ ಗಾಳಿಗೆ, ಭೂಮಿ ತಾಯಿಗೆ ಒಂದು ಧರ್ಮವಿದೆ. ಧರ್ಮದಿಂದ ವಿಮುಖರಾದರೆ ಬದುಕಿ ಬಾಳಲು ಸಾಧ್ಯವಾಗುವುದಿಲ್ಲ ಎಂದರು.
ಪ್ರಾತಃಕಾಲ ಶನೇಶ್ವರ, ಗಣಪತಿ, ಆಂಜನೇಯ ಮತ್ತು ನಾಗದೇವತೆ ಮೂರ್ತಿಗಳಿಗೆ ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಹೋಮ, ಹವನ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಮತ್ತು ಗುಲಬರ್ಗಾದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಕಳಸಾರೋಹಣ ನೆರವೇರಿಸಿದರು.
ಗಂಜಿಗಟ್ಟಿಯ ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು, ಕರೇವಾಡಿಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿದ್ದರು. ಈ ವೇಳೆ ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಮಂಜುನಾಥ ಮಾಗಡಿ, ಎನ್.ವಿ. ಹೇಮಗಿರಿಮಠ, ಸಿ.ಆರ್. ಲಕ್ಕುಂಡಿಮಠ, ಎಂ.ಕೆ. ಕಳ್ಳಿಮಠ, ನಾಗಪ್ಪ ಚಿಂಚಲಿ, ಎಸ್.ಪಿ. ಸಭಾವಡೆಯರಮಠ, ವಿರೇಶ ಮಾಮಾನಿ, ಪಂಪನಗೌಡ ಪಾಟೀಲ, ಶಂಕರ ಬ್ಯಾಡಗಿ, ಶನೇಶ್ವರ ದೇವಸ್ಥಾನದ ಅರ್ಚಕ ಶರಣಯ್ಯ ಹಿರೇಮಠ, ಈರಯ್ಯ ಹಿರೇಮಠ ಸೇರಿ ಹಲವರಿದ್ದರು. ರೇಖಾ ವಡಕಣ್ಣವರ ನಿರೂಪಿಸಿದರು.