ವಿಜಯಸಾಕ್ಷಿ ಸುದ್ದಿ, ಡಂಬಳ : ಹಳ್ಳಿಗಳ ಕೊಳಚೆ ನೀರು ನದಿ ಹಾಗೂ ಜಲ ಮೂಲಗಳಿಗೆ ಸೇರುವ ಮುನ್ನ ಸಂಸ್ಕರಿಸಿ ಹರಿಸುವ ವಿನೂತನ ಬೂದು ನೀರು ನಿರ್ವಹಣಾ ವ್ಯವಸ್ಥೆಯನ್ನು ಡಂಬಳ ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಮಗಾರಿ ಸ್ಥಳಗಳಿಗೆ ಮುಂಡರಗಿ ತಾಲೂಕಾ ಪಂಚಾಯತ ಇಒ ವಿಶ್ವನಾಥ ಹೋಸಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಂಬಳ ಗ್ರಾಮದಲ್ಲಿ ತಾ.ಪಂ ವತಿಯಿಂದ ವಿನೂತನವಾಗಿ ಸುಸ್ಥಿರ ಬೂದು ನಿರ್ವಹಣೆಗೆ ಮೊದಲ ಹೆಜ್ಜೆಯಾಗಿ ರೋಣ ಮತಕ್ಷೇತ್ರದ ಡಂಬಳ ಗ್ರಾಮದಲ್ಲಿ 20 ಲಕ್ಷ ರೂ.ಗಳಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ 5 ಲಕ್ಷ ರೂ ಕಂಪೌಡ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಂಬಳ ಮತ್ತು ಡೋಣಿ ಗ್ರಾಮಗಳಲ್ಲಿ ಬೂದು ಮುಕ್ತ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲಾಗುತ್ತಿದ್ದು ಡಂಬಳದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನದಿಯ ನೀರು ವಿಷಮುಕ್ತಗೊಳಿಸುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಾಣ ಮಾಡಲಾಗಿದೆ. ಸಿಮೆಂಟ್ ಕಾಲುವೆಗಳಲ್ಲಿ ನೀರು ಹರಿದು ಈ ಕಾಲುವೆಗೆ ಸಂಪರ್ಕ ಹೊಂದುವಂತೆ ಕೆಳಹಂತದಲ್ಲಿಯೇ ಕಲ್ಲಿನಿಂದ ನಿರ್ಮಾಣ ಮಾಡಿದ ಚರಂಡಿ ಮೂಲಕ ಹರಿದು ಸಂಸ್ಕರಣೆಗೊಳ್ಳುತ್ತದೆ. ನಂತರ ಈ ತೊಟ್ಟಿಯಿಂದ ನೀರು ಸೇರುವ ಮುನ್ನವೇ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಿ ನೀರು ನದಿ ಸೇರದೆ, ಜಲಮೂಲಗಳಿಗೆ ಸೇರುವಂತೆ ಯೋಜನೆಯನ್ನು ವಿನ್ಯಾಸ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಿಆರ್ಡಿ ಸಹಾಯಕ ಅಭಿಯಂತರ ಮಂಜುನಾಥ ಕಲಬುರ್ಗಿ, ತಾಂತ್ರಿಕ ಸಂಯೋಜಕ ಹರೀಶ ಸೊಬರದ, ಎನ್ಆರ್ಜಿ ತಾಂತ್ರಿಕ ಸಹಾಯಕ ಆಂಜನೆಯ ಬಿ, ಡಂಬಳ ಗ್ರಾ.ಪಂ ಪಿಡಿಒ ಶಶಿಧರ ಹೊಂಬಳ ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರಿದ್ದರು.



