ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲೊಬ್ಬ ಅತ್ಯಂತ ಬಡ ಕುಟುಂಬದ ಮಹಿಳೆ ತನ್ನ ಕುಟುಂಬಕ್ಕೆ ಭದ್ರ ನೆಲೆ, 2 ಹೊತ್ತು ನೆಮ್ಮದಿಯಿಂದ ಊಟ ಮಾಡಲಾಗದ ಬಡತನದ ಕೆಟ್ಟ ಪರಿಸ್ಥಿತಿ ಇದ್ದರೂ ಸಹ ತಾನೂ ಸೇರಿ ಪತಿ, 3 ಜನ ಪದವೀಧರ ಮಕ್ಕಳ ದುಡಿಮೆ, ಸಹಾಯ-ಸಹಕಾರದೊಂದಿಗೆ ವಯೋವೃದ್ಧರ, ನಿರ್ಗತಿಕರ, ಅನಾಥರ ಸೇವೆಯನ್ನು ಯಾವುದೇ ಪ್ರಚಾರ ಬಯಸದೇ ಮಾಡುತ್ತಿದ್ದಾರೆ. ಈ ಕಾಲದಲ್ಲೂ ಈ ರೀತಿ ನಿಸ್ವಾರ್ಥ ಸೇವೆ ಮಾಡುವ ಮತ್ತು ತಂದೆ-ತಾಯಿ ಮಾಡುವ ಕಾರ್ಯಕ್ಕೆ ಹೊಸ ತಲೆಮಾರಿನ ಮಕ್ಕಳೂ ಕೈ ಜೋಡಿಸುತ್ತಿರುವುದು ಅಪರೂಪವೇ ಸರಿ.
ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದ ಮಹಿಳೆ ಲಕ್ಷ್ಮವ್ವ ಪರಮೇಶಪ್ಪ ಮೆಳ್ಳಿಗಟ್ಟಿ ಬಡತನದಲ್ಲಿಯೂ ಸಮಾಜ ಸೇವೆ ಮಾಡುವ ಹಂಬಲ ಹೊಂದಿದ್ದಾರೆ. ಸ್ವಂತ ಜಮೀನು ಇಲ್ಲ. ಪತಿಯೊಂದಿಗೆ ಕೂಲಿ ಮಾಡಿದರೆ ಮಾತ್ರ ಬದುಕು ಸಾಗಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿಯೂ ಮೂವರು ಗಂಡು ಮಕ್ಕಳಿಗೆ ಪದವಿ ಶಿಕ್ಷಣ, ಮಗಳಿಗೆ ಹೈಸ್ಕೂಲ್ ಶಿಕ್ಷಣ ಕೊಡಿಸಿದ್ದಾರೆ. ಮನೆಯಲ್ಲಿ ಚಿಪ್ಸ್ ಮಾಡಿ ಮಾರಾಟ ಮಾಡುವುದು, ಜಾತ್ರೆ-ಹಬ್ಬಗಳ ಸಂದರ್ಭದಲ್ಲಿ ಕುರುಕಲು ತಿಂಡಿ ಮಾರಾಟ ಮಾಡಿ ಬದುಕು ಸಾಗಿಸುವ ಸಂದರ್ಭದಲ್ಲಿಯೂ ಹಿರಿಯರು, ಅನಾಥರು, ನಿರ್ಗಗತಿಕರಿಗೆ ಸಹಾಯ ಮಾಡುವ ಕಾರ್ಯ ಮಾಡುತ್ತಾ ಬಂದಿದ್ದಾರೆ.
ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಉದ್ಯೋಗ ಮಾಡಲು ಸಾಲ ಮಾಡಿ ಟ್ರಾö್ಯಕ್ಟರ್ ಖರೀದಿಸಿದ್ದಾರೆ, ಮನೆ ಕಟ್ಟಕೊಂಡಿದ್ದಾರೆ. ಸಾಲ ತೀರಿಸಲಾಗದೇ ಚಿಂತೆಗೀಡಾದ ಲಕ್ಷ್ಮವ್ವ ತನ್ನ ಕಿಡ್ನಿ ಮಾರಾಟ ಮಾಡಿ ಸಾಲತೀರಿಸುವ ನಿರ್ಧಾರಕ್ಕೆ ಬಂದು ಕೊನೆಯ ಹಂತದ ಪ್ರಯತ್ನ ಮಾಡಿದ್ದಾಳೆ. ಈ ವೇಳೆ ಗ್ರಾ.ಪಂ ಸದಸ್ಯ ಪದ್ಮರಾಜ ಪಾಟೀಲ ಅವರ ಸಹಕಾರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಆಗ ಕುಮಾರ ಸ್ವಾಮಿಯವರು ಕುಟುಂಬ ನಿರ್ವಹಣೆಗೆ 3 ಆಕಳು ಮತ್ತು ಭೂಒಡೆತನ ಯೋಜನೆಯಡಿ ಸಮೀಪದ ಶಿಗ್ಲಿ-ಬಸನಕೊಪ್ಪ ಸಮೀಪ 2.26 ಎಕರೆ ಜಮೀನು ಕೊಡಿಸಿದ್ದರು. ಇಷ್ಟೆಲ್ಲ ಕಷ್ಟದ ನಡುವೆಯೂ ಮಹಿಳೆಗೆ ಸಮಾಜಸೇವೆ ಹಂಬಲ ಮಾತ್ರ ಕುಂದಿರಲಿಲ್ಲ.
ಭೂಒಡೆತನ ಯೋಜನೆಯಡಿ ಪಡೆದ ಜಮೀನಿನಲ್ಲಿಯೇ ತಗಡಿಗ ಶೆಡ್ನಲ್ಲಿ 2 ವರ್ಷದಿಂದ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಯಾರೊಬ್ಬರ ಸಹಾಯವಿಲ್ಲದೇ ತಮ್ಮ ಕುಟುಂಬದ ಕೂಲಿ ಹಣ ಮತ್ತು ಜಮೀನಿನ ಆದಾಯದಿಂದಲೇ ವೃದ್ಧಾಶ್ರಮ ಸಾಗುತ್ತಿದೆ. ಪತಿಯ ತಂದೆ ಅಂದರೆ ಮಾವನವರ ಆಸೆಯಂತೆ ಶಿವಪ್ಪನಾಯಕ ಮಹಿಳಾ ವಿವಿದೋದ್ದೇಶಗಳ ಸಂಸ್ಥೆಯಡಿ `ತಂದೆಯ ಕನಸು’ ಹೆಸರಿನಲ್ಲಿ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ಅನಾಥ, ನಿರ್ಗತಿಕ, ಅಸಹಾಯಕರಾದ 6 ಜನ ವೃದ್ಧರು ಆಶ್ರಯ ಪಡೆದಿದ್ದಾರೆ. ಬಸನಕೊಪ್ಪ, ಶಿಗ್ಲಿ, ಲಕ್ಷೇಶ್ವರ, ಕೊಕ್ಕಗೊಂದಿ, ಬೂದಿಹಾಳ ಗ್ರಾಮದ 6 ಜನ ವೃದ್ಧರ ಸೇವೆಯನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಇದರ ಜೊತೆಗೆ ಒಡೆಯರ ಮಲ್ಲಾಪುರ ಗ್ರಾಮದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿ ಶಿವರಾತ್ರಿ ದಿನ ವಿಶೇಷ ಆಚರಣೆ ಮಾಡುತ್ತಾರೆ.
ನನಗೀಗ 80 ವರ್ಷ ವಯಸ್ಸು. ನನ್ನ ಕುಟುಂಬದವರೇ ನನ್ನನ್ನು ನಿರ್ಲಕ್ಷಿಸಿದ್ದರೂ ಲಕ್ಷ್ಮವ್ವ ಮೆಳ್ಳಿಗಟ್ಟಿ ಮತ್ತು ಅವರ ಪತಿ ಪರಮೇಶಪ್ಪ ಅವರ ಮೂವರು ಮಕ್ಕಳು ನನ್ನನ್ನು ತನ್ನ ಕುಟುಂಬದ ಹಿರಿಯಜ್ಜಿಯ ರೀತಿಯಲ್ಲಿ ಜೋಪಾನ ಮಾಡುತ್ತಿದ್ದಾರೆ. ಲಕ್ಷö್ಮವ್ವನ ಸಮಾಜ ಸೇವೆಗೆ ಸರಕಾರ, ಜನಪ್ರತಿನಿಧಿಗಳು ಕೈ ಜೋಡಿಸಬೇಕು. ಹೊಲದಲ್ಲಿಯೇ ಇರುವ ತಗಡಿನ ವೃದ್ಧಾಶ್ರಮ ಕಟ್ಟಡವಾಗಬೇಕು.
– ತಾಯವ್ವ ಕಿತ್ತೂರ.
ಆಶ್ರಯ ಪಡೆದ ವೃದ್ಧೆ.
ಜೀವಿತಾವಧಿಯಲ್ಲಿ ನಾವು ಮಾಡುವ ಕಾರ್ಯಗಳು, ಸೇವೆ ಅಜರಾಮರ, ಅದರಲ್ಲಿ ಸಿಗುವ ಸಂತೃಪ್ತಿ ಜೀವನ್ಮುಕ್ತಿಗೆ ರಹದಾರಿ. ನಮ್ಮ ಕುಟುಂಬದ ಜತೆಗೆ ಅನಾಥ, ನಿರ್ಗತಿಕರಿಗೆ ಅನ್ನ, ಆಶ್ತಯ ಕಲ್ಪಿಸಬೇಕೆಂಬ ನಮ್ಮ ಮತ್ತು ಹಿರಿಯರ ಆಸೆಯಂತೆ ವೃದ್ಧಾಶ್ರಮ ನಡೆಸುತ್ತಿದ್ದೇವೆ. ಇದಕ್ಕೆ ಮಕ್ಕಳೂ ಬೇಸರಿಸದೇ ನಮ್ಮ ಜೊತೆಗಿದ್ದು ಸೇವೆ ಮಾಡುತ್ತಿದ್ದಾರೆ. ವಿಧಾನಸಬೆ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ ಅವರು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಶ್ಲಾಘಿಸಿದ್ದಾರೆ. ಭವಿಷ್ಯದಲ್ಲಿ ಬಡ ಅಂಗವಿಕಲ ಮಕ್ಕಳನ್ನು ಜೋಪಾನ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಕಾರ್ಯದಲ್ಲಿ ಯಾವುದೇ ಆಸೆ-ದುರುದ್ದೇಶವಿಲ್ಲ.
– ಲಕ್ಷö್ಮವ್ವ-ಪರಮೇಶಪ್ಪ ದಂಪತಿಗಳು.