ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಇಲ್ಲಿನ ಕಮ್ಮತ್ತಹಳ್ಳಿ ಗ್ರಾಮದ ಪುರಾತನ ಬಾವಿ ಪುನಶ್ಚೇತನಗೊಳಿಸಿ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ದೇವರ ಕೇಲುಗಳು, ಶಿವಲಿಂಗ, ಬಸವಣ್ಣ ಮೂರ್ತಿಗಳು ಪತ್ತೆಯಾಗಿವೆ. ಬಾವಿಯ ತಳಭಾಗದ ಗೋಡೆಯ ಪೂರ್ವ ಅಭಿಮುಖವಾಗಿ ಮೂರು ದೇವರ ಕೇಲುಗಳು, ಸುಮಾರು ಒಂದು ಅಡಿ ಎತ್ತರದ ಏಕಶಿಲಾ ಶಿವಲಿಂಗ ಹಾಗೂ ಹಲವು ಬಸವಣ್ಣ ಮೂರ್ತಿಗಳು ದೊರತಿದೆ.
ಮಡಿಕೆಗಳನ್ನು (ಕೇಲು) ಮುಚ್ಚಲಾಗಿದ್ದು, ಒಳಗಡೆ ಏನಿದೆ ಎಂಬುದು ತಿಳಿದಿಲ್ಲ. ಹೂಳು ಹೊರ ತೆಗೆಯುವ ಸಂದರ್ಭದಲ್ಲಿ ಕಾರ್ಮಿಕರ ಕಣ್ಣಿಗೆ ಬಿದ್ದಿದ್ದು, ಅಚ್ಚರಿ ಮೂಡಿಸಿದೆ. ಸುಮಾರು 500 ವರ್ಷಗಳ ಹಳೆಯ ಬಾವಿ ಇದಾಗಿದ್ದು, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪುಣಭಗಟ್ಟ ಗ್ರಾ.ಪಂ ವತಿಯಿಂದ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಪುನಶ್ಚೇತನ ಕಾಮಗಾರಿ ಕೈಗೊಳ್ಳಲಾಗಿತ್ತು.
ಕ್ರಿ.ಶ 1784ರ ಸಮಯದಲ್ಲಿ ಹರಪನಹಳ್ಳಿ-ಉಚ್ಚಂಗಿದುರ್ಗವನ್ನು ಚಿತ್ರದುರ್ಗದ ಮೂಲ ಪುರುಷ ಚಿತ್ರನಾಯಕ, ಹರಪನಹಳ್ಳಿ ಸೋಮಶೇಖರ ಆಳ್ವಿಕೆ ನಡೆಸಿದ್ದಾರೆ. ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ರೈತರಿಗೆ ಕಮ್ಮತ್ತದಿಂದ ನೀಡಿದ್ದರು. ರೈತರ ಉಪಯೋಗಕ್ಕೆ ಬಾವಿಯನ್ನು ಕೊರೆಯಿಸಲಾಗಿದೆ. ಅಂದಿನ ಕಮ್ಮತ್ತವು ಇಂದು ಕಮ್ಮತ್ತಹಳ್ಳಿ ಆಗಿದೆ.