ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಾರ್ವಜನಿಕರು ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ ಸಿದ್ದು ಹನಮನಾಳ ಕರೆ ನೀಡಿದರು.
ಅವರು ಸಮೀಪದ ಅಬ್ಬಿಗೇರಿ ಗ್ರಾಮದ ಸಂತೆ ಬಜಾರದಲ್ಲಿ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಡೆದ ವಿಶೇಷ ಯಶಸ್ವಿನಿ ಯೋಜನೆಯ ನೋಂದಣಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಂಡಲ್ಲಿ ಅನಾರೋಗ್ಯಕ್ಕೀಡಾದಾಗ ಹತ್ತಿರದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿನ ಪ್ರತಿಷ್ಠಿತ ನೋಂದಾಯಿತ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಆದರೆ ಅನೇಕ ಜನರು ತಪ್ಪು ತಿಳುವಳಿಕೆಯಿಂದ ಇದರ ಪ್ರಯೋಜನ ಪಡೆದುಕೊಳ್ಳದೆ ಹಣ ಕಳೆದುಕೊಳ್ಳುತ್ತಾರೆ. ನಮ್ಮ ಸಂಘದ ಪ್ರತಿಯೊಬ್ಬ ಸದಸ್ಯರೂ ಯಶಸ್ವಿನಿ ಯೋಜನಗೆ ಸೇರ್ಪಡೆಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಅಜ್ಜಪ್ಪಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷ ಗದಗ ಜಿಲ್ಲೆಯಲ್ಲಿಯೇ ಎರಡನೇ ಹೆಚ್ಚು ಸದಸ್ಯರನ್ನು ನಮ್ಮ ಸಂಘ, ಯೋಜನೆ ವ್ಯಾಪ್ತಿಗೆ ಒಳಪಡಿಸಿತ್ತು. ಅದರಂತೆ ಈ ವರ್ಷ ಕೂಡಾ ಗುರಿ ಸಾಧನೆಯತ್ತ ಗಮನ ಹರಿಸಿ, ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಈ ಯೋಜನೆಗೆ ಮಾರ್ಚ್ 31 ಕೊನೆಯ ದಿನವಾಗಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಡಾ. ಆರ್.ಬಿ. ಬಸವರಡ್ಡೇರ, ಸಂಘದ ನೂತನ ಉಪಾಧ್ಯಕ್ಷ ಅಂದಪ್ಪ ದ್ವಾಸಲಕೇರಿ, ನಿರ್ದೇಶಕರಾದ ಸುರೇಶ ಬಸವರಡ್ಕೇರ, ಗುರಣ್ಣ ಅವರಡ್ಡಿ, ಮಲ್ಲಿಕಾರ್ಜುನ ಯಲ್ಲರಡ್ಡಿ, ಅಂದಪ್ಪ ವೀರಾಪುರ, ಈರಪ್ಪ ತಳವಾರ, ನಾಗನಗೌಡ ಚನ್ನಪ್ಪಗೌಡ್ರ, ಶಿವಪುತ್ರಪ್ಪ ತೆಗ್ಗಿನಕೇರಿ, ಲಲಿತಾ ಬಸವರಡ್ಡೇರ, ಲಕ್ಷ್ಮವ್ವ ಡಂಬಳ, ಶರಣಪ್ಪ ಬಸವರಡ್ಡೇರ ಪಾಲ್ಗೊಂಡಿದ್ದರು. ಸಿಬ್ಬಂದಿಗಳಾದ ವಿರುಪಾಕ್ಷ ಅಕ್ಕಸಾಲಿ, ಅಯ್ಯಪ್ಪ ಮಳಗಿ, ದೇವರಾಜ ತಳಕಲ್, ಶಿವಪ್ಪ ಬಂಡಿಹಾಳ, ಶರಣಪ್ಪ ಹೂಗಾರ ಕಾಂಗ್ರೆಸ್ ಪಕ್ಷದ ಮುಖಂಡ ಬಸವರಾಜ ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು.