ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಿ ಬಲಿಷ್ಠಗೊಳಿಸಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವಿರತವಾಗಿ ಶ್ರಮಿಸಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡದೆ ಕೆ.ಎಸ್. ಈಶ್ವರಪ್ಪ ಸ್ವಾಭಿಮಾನಕ್ಕೆ ಧಕ್ಕೆ ತಂದ ಬಿಜೆಪಿಗೆ ಪಾಠ ಕಲಿಸುವಲ್ಲಿ ರಾಜ್ಯಾದ್ಯಂತ ಕುರುಬ ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕೆಂದು ಕೆ.ಎಸ್. ಈಶ್ವರಪ್ಪ ಅಭಿಮಾನಿ ಬಳಗದ ಅರುಣ್ ಅಣ್ಣಿಗೇರಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಾದ್ಯಂತ ಕೆ.ಎಸ್. ಈಶ್ವರಪ್ಪ ಅವರ ಅಭಿಮಾನಿಗಳು ಒಟ್ಟಾಗಿ, ಪಕ್ಷಾತೀತವಾಗಿ ಅವರನ್ನು ಬೆಂಬಲಿಸುವ ಮೂಲಕ ಅವರಿಗೆ ಶಕ್ತಿ ತುಂಬುವ ಉದ್ದೇಶದಿಂದ ಮಾ.24ರಂದು ಬೆಳಿಗ್ಗೆ 11 ಗಂಟೆಗೆ ಗದಗ ನಗರದ ಮೌರ್ಯ ಹೋಟೆಲ್ನಲ್ಲಿ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯ ಸಾನಿಧ್ಯವನ್ನು ಪೂಜ್ಯ ಬಸವರಾಜದೇವರು ಮನ್ಸೂರ ರೇವಣಸಿದ್ದೇಶ್ವರ ಮಹಾಮಠ ಧಾರವಾಡ, ಹಾಲುಮತ ಗುರುಸ್ವಾಮಿಗಳಾದ ಶ್ರೀ ಶಿವಲಿಂಗಸ್ವಾಮಿಗಳು ವಹಿಸಲಿದ್ದಾರೆ.
ಈ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪನವರ ಅಭಿಮಾನಿಗಳು ಎಲ್ಲರೂ ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಿ ಈಶ್ವರಪ್ಪನವರಿಗೆ ರಾಜಕೀಯ ಶಕ್ತಿ ನೀಡುವ ಪಣ ತೊಡಬೇಕು ಎಂದು ಅರುಣ್ ಅಣ್ಣಿಗೇರಿ, ಸುಜಾತಾ ಕಳ್ಳಿಮನಿ, ಮಾಂತೇಶ್ ಅರ್ಗಂಜಿ, ಶಿವಾನಂದ ಮುತ್ತಣ್ಣವರ್ ಮುಂತಾದವರು ತಿಳಿಸಿದ್ದಾರೆ.