ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಅಡರಕಟ್ಟಿ, ಹರದಗಟ್ಟಿ, ಮಂಜಲಾಪೂರ, ಸುವರ್ಣಗಿರಿ ತಾಂಡೆ, ಬಟ್ಟೂರ, ರಾಮಗೇರಿ, ಬಾಲೆಹೊಸೂರ, ಯಳವತ್ತಿ, ದೊಡ್ಡೂರ ಸೇರಿ 23 ಗ್ರಾಮಗಳಲ್ಲಿ ಸೋಮವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಯುವಕರು, ಮಕ್ಕಳು ಪರಸ್ಪರ ಬಣ್ಣ ಎರಚಿ ರಂಗಿನೋಕಳಿಯಲ್ಲಿ ಮಿಂದೆದ್ದರು.
ಬೆಳ್ಳಂಬೆಳಿಗ್ಗೆ ಮಕ್ಕಳು ಹೆಣ್ಣು-ಗಂಡು ಬೇಧಬಾವವಿಲ್ಲದೇ ಬಣ್ಣದ ನೀರು ತುಂಬಿದ್ದ ಪಿಚಕಾರಿ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದು ಪರಸ್ಪರ ಬಣ್ಣ ಎರಚಿ ಖುಷಿಪಟ್ಟರು. ಸುಡುಬಿಸಿಲು ಲೆಕ್ಕಿಸದೇ ಹಲವೆಡೆ ಅಣುಕು ಶವಯಾತ್ರೆ, ಆಕರ್ಷಕ ಉಡುಗೆ ತೊಟ್ಟು ಹಲಗೆಯ ತಾಳಕ್ಕೆ ತಕ್ಕಂತೆ ಕುಣಿದರು. ಓಕುಳಿ ಬಳಿಕ ಕಾಮನದಹನದ ಸಂಪ್ರದಾಯ ನೆರವೇರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಬೋರ್ಡ್ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಹಬ್ಬದ ಆಚರಣೆ ನೆರವೇರಿತು.
ಮಾ.26ರಂದು ತಾಲೂಕಿನ ಸೂರಣಗಿ, ಗೊಜನೂರ, ಪು.ಬಡ್ನಿ, ಸೋಗಿವಾಳ ಗ್ರಾಮದಲ್ಲಿ ಮತ್ತು ಮಾ.29ರಂದು ಶಿಗ್ಲಿ ಗ್ರಾಮದಲ್ಲಿ ಹೋಳಿ ಆಚರಣೆ ನಡೆಯಲಿದೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಾ.29ರಂದು ಶುಕ್ರವಾರ ಸಂತೆ ದಿನವಾಗಿದ್ದರಿಂದ ಗ್ರಾಮೀಣ ಪ್ರದೇಶಗಳಿಂದ ಬರುವ ಜನತೆಗೆ, ವ್ಯಾಪಾರ-ವಹಿವಾಟಿಗೆ ತೊಂದರೆಯಾಗಬಾರದೆಂದು ಮಾ.30ರ ಶನಿವಾರ ರಂಗಪಂಚಮಿ ಆಚರಿಸಲು ನಿರ್ಧರಿಸಲಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಹಬ್ಬದ ಆಚರಣೆ ಪೂರ್ಣಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ನೀರನ್ನು ಹಿತ-ಮಿತವಾಗಿ ಬಳಸಲು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮನವಿ ಮಾಡಿದ್ದಾರೆ.