ವಿಜಯಸಾಕ್ಷಿ ಸುದ್ದಿ, ರೋಣ : ಗ್ರಾಮೀಣ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ಕೆಲಸವಿಲ್ಲದೇ ಗುಳೆ ಹೋಗುತ್ತಾರೆ.
ಅದನ್ನು ತಪ್ಪಿಸಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ. ಪ್ರತಿ ಮನೆಗೆ ಹೋಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಏಪ್ರಿಲ್ 1ರಿಂದ ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ, ಗುಳೇ ತಪ್ಪಿಸಿ ಎಂದು ಜಿಲ್ಲಾ ಮಾಹಿತಿ ಶಿಕ್ಷಣ, ಸಂವಹನ ಸಂಯೋಜಕರಾದ ವಿ.ಎಸ್. ಸಜ್ಜನ ಹೇಳಿದರು.
ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯತಿಯಲ್ಲಿ `ವಲಸೆ ಯಾಕ್ರೀ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ-ದುಡಿಮೆ ಖಾತ್ರಿ’ ಅಭಿಯಾನದಡಿ ಕಾಯಕ ಬಂಧುಗಳ, ಸ್ವಸಹಾಯ ಸಂಘಗಳ ಸದಸ್ಯರ, ಕೂಲಿಕಾರರ ಸಭೆಯಲ್ಲಿ ಅವರು ಮಾತನಾಡಿದರು.
ಏಪ್ರಿಲ್ 1ರಿಂದ ನಿಮ್ಮ ಗ್ರಾಮದಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಎಲ್ಲಾ ಗ್ರಾ.ಪಂ ಅಧಿಕಾರಿಗಳಿಗೆ ಜಿ.ಪಂ ಸಿಇಓ ಅವರು ತಿಳಿಸಿದ್ದಾರೆ. ಹಾಗಾಗಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಕಾಯಕ ಬಂಧುಗಳಾದ ತಾವೆಲ್ಲರೂ ಕೂಲಿಕಾರರ ಆರ್ಥಿಕ ಸಬಲತೆಗಾಗಿ ದುಡಿಯಬೇಕು. ಬಂಧು ಅಂದರೆ ಜನರಿಗೆ ಹತ್ತಿರ ಇದ್ದವರು ಎಂದರ್ಥ. ದುಡಿಯುವ ವರ್ಗಕ್ಕೆ ಹತ್ತಿರ ಇರುವ ತಮಗೆ ಕಾಯಕ ಬಂಧುಗಳು ಎನ್ನಲಾಗುತ್ತದೆ.
ಕಡ್ಡಾಯವಾಗಿ ಈಬಾರಿ ಗ್ರಾಮ ಪಂಚಾಯಿತಿಯಿಂದ ನೋಂದಾಯಿಸಲ್ಪಟ್ಟ ಕುಟುಂಬಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದೆ ಇರುವವರನ್ನು ಗುರುತಿಸಿ ಸದರಿಯವರನ್ನು ಪಾಲ್ಗೊಳ್ಳುವಂತೆ ಮಾಡಲು ಮನೆ ಮನೆಗೆ ತೆರಳಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಶ್ರಿಂಗೇರಿ, ತಾಲೂಕಾ ಮಾಹಿತಿ ಶಿಕ್ಷಣ & ಸಂವಹನ ಸಂಯೋಜಕ ಮಂಜುನಾಥ, ಬಿಎಫ್ಟಿ ಈರಣ್ಣ ಬೆಲೇರಿ, ಜಿಕೆಎಮ್ ಚಾಂದಬಿ ಕರ್ನಾಚಿ, ಗ್ರಾ.ಪಂ ಸದಸ್ಯರು, ಕಾಯಕ ಬಂಧುಗಳು ಹಾಗೂ ಸಿಬ್ಬಂದಿಗಳು ಇದ್ದರು.
ಕೆಲಸದ ಸ್ಥಳದಲ್ಲಿ ನೀರು, ನೆರಳು ಸೇರಿದಂತೆ ಮಕ್ಕಳಿಗಾಗಿಯೇ ಗ್ರಾಮದಲ್ಲಿ ಕೂಸಿನ ಮನೆ ಸಹ ತೆರಯಲಾಗಿದ್ದು, ಪಾಲಕರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗಬೇಕು. ಅದನ್ನು ನೀವು ಜನರಿಗೆ ತಿಳಿಸಬೇಕು. ಮುಖ್ಯವಾಗಿ, ಕೆಲಸಕ್ಕೆ ಬಂದವರಿಗೆ ಅಳತೆ ತಕ್ಕ ಹಾಗೆ ಕಡೆಯುವದು ಕಡ್ಡಾಯ. ತಾರತಮ್ಯವಿಲ್ಲದಂತೆ ಕೆಲಸ ಮಾಡುವದು ತಮ್ಮ ಕರ್ತವ್ಯ ಎಂದು ವಿ.ಎಸ್. ಸಜ್ಜನ ತಿಳಿಸಿದರು.